ಜನಾ ರೆಡ್ಡಿಗೆ ಜಾಮೀನು ಬಹುದೂರ: 3 ತಿಂಗಳು ಜೈಲೇ ಗತಿ

ಸಿಬಿಐ ವಿಶೇಷ ನ್ಯಾಯಾಲಯ, ಆಂಧ್ರ ಪ್ರದೇಶ ಹೈಕೋರ್ಟ್ ಇಲ್ಲವೆ ಸುಪ್ರೀಂಕೋರ್ಟ್ನಲ್ಲಿ ಜಾಮೀನು ಸಿಕ್ಕರೆ 3 ತಿಂಗಳೊಳಗೆ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯ. ಇಲ್ಲದಿದ್ದರೆ ವಿಚಾರಣೆ ಮುಗಿದು ತೀರ್ಪು ಪ್ರಕಟ ಆಗುವವರೆಗೆ ರೆಡ್ಡಿಗೆ ಜೈಲೇ ಗತಿ. ಆರೋಪ ಸಾಬೀತಾದರಂತೂ 7 ವರ್ಷ ಇದೇ ಜೈಲಿನಲ್ಲಿರಬೇಕಾಗುತ್ತದೆ.
ಇನ್ನು, ನ್ಯಾಯಾಲಯಗಳೋ ಇತ್ತೀಚೆಗೆ ರಾಜಾ, ಕಲ್ಮಾಡಿ, ಕನ್ನಿಮೋಳಿ, ಹತ್ತಿರದಲ್ಲೇ ಇರುವ ಕಟ್ಟಾಳುಗಳಿಗೆ ಸುಕತರಾಂ ಜಾಮೀನು ನೀಡುವುದಿಲ್ಲ ಎಂಬ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿರುವಾಗ ಜನಾ ಯಾವ ಲೆಕ್ಕ ಎನ್ನಲಾಗಿದೆ.
ಅದಕ್ಕಿಂತ ಹೆಚ್ಚಾಗಿ ಈ ಜನಾ ರೆಡ್ಡಿ ಭಾರಿ ಕುಳ. ಹೊರಗೆ ಬಿಟ್ಟರೆ ತೋಳ್ಬಲ, ಹಣ ಬಲವನ್ನು ಧಾರಾಳವಾಗಿ ಬಳಸುತ್ತಾರೆ. ಇದರಿಂದ ಸಾಕ್ಷ್ಯಗಳು ಹೊಗೆ ಹಾಕಿಸಿಕೊಳ್ಳುತ್ತವೆ. ಆದ್ದರಿಂದ ಮೈ ಲಾರ್ಡ್ ಕೈದಿ ನಂ. 697ಗೆ ಖಂಡಿತಾ ಜಾಮೀನು ನೀಡಬೇಡಿ ಎಂದು ಸಿಬಿಐ ನ್ಯಾಯವಾದಿಗಳು ನ್ಯಾಯಾಲಯಕ್ಕೆ ಅಲವತ್ತುಕೊಳ್ಳುವುದು ಗ್ಯಾರಂಟಿ.
ತಕ್ಷಣ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸುವುದು ರೆಡ್ಡಿಗಿರುವ ಮೊದಲ ಮಾರ್ಗ. ಅಧೀನ ನ್ಯಾಯಾಲಯದಲ್ಲಿ ಜಾಮೀನು ನಿರಾಕರಣೆಯಾದರೆ ಹೈಕೋರ್ಟ್ಗೆ ಹೋಗಬೇಕಾಗುತ್ತದೆ. ಅಲ್ಲೂ ಜಾಮೀನು ಸಿಗದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗುವುದು ಅನಿವಾರ್ಯ.
ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸದಿದ್ದರೆ ವಿಚಾರಣೆ ಮುಗಿಯುವವರೆಗೆ ಜೈಲು ವಾಸವೇ ಗತಿ. ಸದ್ಯಕ್ಕೆ ಜಾಮೀನು ಕೋರಿ ಕೋರ್ಟ್ಗಳಿಗೆ ಮೊರೆ ಹೋಗುವುದನ್ನು ಬಿಟ್ಟು ರೆಡ್ಡಿಗೆ ಬೇರೆ ಮಾರ್ಗವಿಲ್ಲ. ಮೂರು ನ್ಯಾಯಾಲಯಗಳಲ್ಲೂ ಜಾಮೀನು ಸಿಗದಿದ್ದರೆ ವಿಚಾರಣೆ ಮುಗಿದ ತೀರ್ಪು ಪ್ರಕಟ ಆಗುವವರೆಗೆ ಚಂಚಲಗೂಡು ಕೇಂದ್ರ ಕಾರಾಗೃಹವೇ ರೆಡ್ಡಿಗೆ ಖಾಯಂ.












Click it and Unblock the Notifications