ಕರುಣಾ, ರಾಮುಲು ಬಂಧನ ಯಾವಾಗ?
ಜನಾರ್ದನರೆಡ್ಡಿ ಮತ್ತು ಶ್ರೀನಿವಾಸರೆಡ್ಡಿ ವಿಚಾರಣೆ ಸಂದರ್ಭದಲ್ಲಿ ಸಿಗುವ ಮಾಹಿತಿ ಹಾಗೂ ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕೆನಿಸಿದರೆ ಓಎಂಸಿಯ ಇತರೆ ನಿರ್ದೇಶಕರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಹಳೆ ಕೇಸಿಗೆ ಈಗ ಜೀವ: ಕರ್ನಾಟಕ ಮೂಲದ ಓಬಳಾಪುರಂ ಮೈನಿಂಗ್ ಕಂಪೆನಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕರಾದ ಜನಾರ್ದನರೆಡ್ಡಿ, ಕರುಣಾಕರರೆಡ್ಡಿ ಇತರರ ಮೇಲೆ 2009, ಡಿ.7ರಲ್ಲೇ ಸಿಬಿಐ ಮೊಕದ್ದಮೆ ಮೊಕದ್ದಮೆ ದಾಖಲಿಸಿದೆ.
ಪಿತೂರಿ, ವಂಚನೆ, ಕಳವು, ಅಕ್ರಮ ದಾಸ್ತಾನು ಹಾಗೂ ಸಾಗಾಟ, ಅತಿಕ್ರಮಣ ಪ್ರವೇಶ, ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿಕೆ ಮುಂತಾದ ಆರೋಪಗಳು ದೋಷಾರೋಪಣ ಪಟ್ಟಿಯಲ್ಲಿದೆ. ಅರಣ್ಯ ಸಂರಕ್ಷಣೆ ಕಾಯ್ದೆ, ಖನಿಜ ಸಂಪತ್ತು ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ ಉಲ್ಲಂಘನೆಯೂ ಮೊಕದ್ದಮೆಯಲ್ಲಿ ಸೇರಿದೆ.
ಸಿಬಿಐ ಚಾರ್ಚ್ ಶೀಟ್ ನಲ್ಲಿ ಗಡಿಭಾಗದ ಅತಿಕ್ರಮಣದ ಬಗ್ಗೆ ಉಲ್ಲೇಖವಿಲ್ಲ. ಹಾಗೂ ಈ ಬಗ್ಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ನಡೆದುಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ.
ಆಂಧ್ರ ಹೈಕೋರ್ಟ್ ಸಿಬಿಐ ತನಿಖೆಗೆ ಡಿಸೆಂಬರ್ 14, 2009ರಂದು ಮಧ್ಯಂತರ ತಡೆಯಾಜ್ಞೆ ನೀಡಲಾಗಿತ್ತು. ವಿಭಾಗೀಯ ಪೀಠದ ಮುಂದೆ ಸಿಬಿಐ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಡಿಸೆಂಬರ್ 16, 2010ರಂದು ಈ ತಡೆಯಾಜ್ಞೆ ತೆರವುಗೊಂಡಿತು. ಈಗ ಸಿಬಿಐ ದಿಢೀರ್ ದಾಳಿ ಹಾಗೂ ಬಂಧನದ ಭೀತಿಯನ್ನು ಕರುಣಾಕರ ರೆಡ್ಡಿ ಹಾಗೂ ಶ್ರೀರಾಮುಲು ಎದುರಿಸುತ್ತಿದ್ದು, ಜನಾರ್ದನ ರೆಡ್ಡಿ ಹೇಳಿಕೆ ಮೇಲೆ ಎಲ್ಲವೂ ನಿಂತಿದೆ.