ಸಿದ್ದರಾಮಯ್ಯ ಸಕ್ರಿಯ ರಾಜಕೀಯಕ್ಕೆ ಗುಡ್ ಬೈ?
ಮುಖ್ಯಮಂತ್ರಿಯಾಗುವ ಕನಸು ಕಟ್ಟಿಕೊಂಡೇ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಸಿದ್ದರಾಮಯ್ಯ ರಾಜಕೀಯ ಸನ್ಯಾಸದ ಮಾತುಗಳನ್ನಾಡಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಅವರ ಹಿಂಬಾಲಕರಿಗೆ ದಂಗು ಬಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಕೂಡ ಹೈಕಮಾಂಡ್ ಬಯಸಿದರೆ ಮಾತ್ರ ಸ್ಪರ್ಧಿಸುವುದಾಗಿ ಅವರು ಹೇಳಿದ್ದಾರೆ. ಒತ್ತಾಯ ಬಂದರೆ ಕೊಪ್ಪಳದಿಂದ ಲೋಕಸಭೆಗೆ ಸ್ಪರ್ಧಿಸುವುದಾಗಿ ಹೇಳಿರುವ ಅವರು, ಇಲ್ಲದಿದ್ದರೆ ರಾಜಕೀಯಕ್ಕೆ ವಿದಾಯ ಹೇಳುವ ಮಾತುಗಳನ್ನಾಡಿದ್ದಾರೆ.
ಮೂರುವರೆ ದಶಕಗಳ ರಾಜಕಾರಣ ಸಾಕಾಗಿದ್ದು, ಆರೋಗ್ಯ ಇತ್ತೀಚಿನ ದಿನಗಳಲ್ಲಿ ಏರುಪೇರಾಗುತ್ತಿರುವ ಕಾರಣ ರಾಜಕೀಯ ತ್ಯಜಿಸಿ ವಿಶ್ರಾಂತಿ ಜೀವನ ನಡೆಸುವುದಾಗಿ ಮನದ ಮಾತು ಆಡಿದ್ದಾರೆ ಸಿದ್ದರಾಮಯ್ಯ.
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, ಡಿವಿಎಸ್ ಸಂಪುಟದಲ್ಲಿ ಭ್ರಷ್ಟರೇ ತುಂಬಿದ್ದು, ಮುಂದಿನ ವರ್ಷ ಮೇ ತಿಂಗಳಲ್ಲಿ ಮಧ್ಯಂತರ ಚುನಾವಣೆ ಘೋಷಣೆಯಾಗಲಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿರ್ನಾಮವಾಗುತ್ತದೆಂದು ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಮುನ್ನ ಅವರು ಭವಿಷ್ಯ ನುಡಿದಿದ್ದಾರೆ.