ನಂಜನಗೂಡು ಬಳಿ ಉರುಳಿಗೆ ಸಿಕ್ಕಿ ಬಿದ್ದ ಚಿರತೆ

ಅಡಕನಹಳ್ಳಿ ಹುಂಡಿ ಗ್ರಾಮದಲ್ಲಿ ಜಮೀನಿಗೆ ದಾಳಿ ಮಾಡುವ ಕಾಡು ಹಂದಿಗಳನ್ನು ಹಿಡಿಯುವ ಸಲುವಾಗಿ ಪೊದೆಯೊಂದರಲ್ಲಿ ಉರುಳು ಹಾಕಿಡಲಾಗಿತ್ತು. ಆದರೆ ಅದೇ ಮಾರ್ಗದಲ್ಲಿ ಬಂದ ಚಿರತೆ ಈ ಉರುಳಿಗೆ ಶುಕ್ರವಾರ ಸಿಕ್ಕಿಬಿದ್ದಿತು.
ಚಿರತೆ ಪೊದೆಯಲ್ಲಿ ಹಾಕಲಾಗಿದ್ದ ಉರುಳಿಗೆ ಸಿಕ್ಕಿಬಿದ್ದಿರುವ ವಿಷಯ ತಿಳಿದ ಗ್ರಾಮಸ್ಥರು ನಂಜನಗೂಡು ತಹಶೀಲ್ದಾರ್ ನವೀನ್ ಜೋಸೆಫ್ ಅವರಿಗೆ ತಿಳಿಸಿದ್ದರು. ಅದರಂತೆ ಅವರು ಅರಣ್ಯ ಇಲಾಖೆ ಹಾಗೂ ಮೈಸೂರು ಮೃಗಾಲಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮೈಸೂರು ಮೃಗಾಲಯದ ಸಿಬ್ಬಂದಿ ಅದಕ್ಕೆ ಅರಿವಳಿಕೆ ಚುಚ್ಚುಮದ್ದು ನೀಡುವ ಮೂಲಕ ಚಿರತೆಯನ್ನು ಹಿಡಿದು ಮೃಗಾಲಯಕ್ಕೆ ತಂದಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳುವ ವೇಳೆಗೆ ಚಿರತೆಯನ್ನು ಸುತ್ತುವರಿದ ಗ್ರಾಮಸ್ಥರ ಪೈಕಿ ಕೆಲವರು ಅದರ ಮೇಲೆ ಕಲ್ಲು, ದೊಣ್ಣೆಯನ್ನು ಬೀಸಿದ್ದರಿಂದ ಗಾಯಗೊಂಡಿದೆ.
ಅಲ್ಲದೆ ಉರುಳಲ್ಲಿ ಸಿಕ್ಕಿ ಒದ್ದಾಡಿದ್ದರಿಂದ ನಿತ್ರಾಣಗೊಂಡಿತ್ತು ಹೀಗಾಗಿ ಅದಕ್ಕೆ ಮೃಗಾಲಯದಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದು ಆರೋಗ್ಯ ಸುಧಾರಿಸಿದ ಬಳಿಕ ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗುವುದು ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications