ಸಿಂಗಾಪುರ ಪ್ರವಾಸದ ಬಳಿಕ ಜನಾರ್ದನ ರೆಡ್ಡಿ ನಡೆಯೇನು?

ಇದುವರೆಗೆ ಅಬ್ಬಬ್ಬಾ ಅಂದರೆ ಬೆಂಗಳೂರು ಹೊರಗಿನ ರೆಸಾರ್ಟ್ ಗಳು, ಅಥವಾ ಪಕ್ಕದ ಹೈದರಾಬಾದೋ, ಚೆನ್ನೈ, ಗೋವಾಗೆ ಶಾಸಕರನ್ನು ಅಕ್ಷರಶಃ ಎತ್ತಿಹಾಕಿಕೊಂಡು ಹೋಗಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದರು.
'ಗಾಲಿ'ಯಲ್ಲಿ ಶಾಸಕರು ಲೀನ: ಆದರೆ ಅಕ್ರಮ ಗಣಿಗಾರಿಕೆ ಎಂಬುದು ಈ ಬಾರಿ ತಮಗೆ ಮುಳುಗುನೀರು ತಂದಿದೆ ಎಂಬುದು ಸ್ವತಃ ರೆಡ್ಡಿಗಳಿಗೇ ಮನದಟ್ಟಾಗಿದೆ. ಅದಕ್ಕಾಗಿ ದೂರದ ಹೆಜ್ಜೆ ಹಾಕಿದ್ದಾರೆ. ಸಿಂಗಾಪುರಿಗೆ 15 ಶಾಸಕರನ್ನು ಕರೆದೊಯ್ದಿರುವ ಸೂತ್ರಧಾರ ಜನಾರ್ಧನ ರೆಡ್ಡಿ ತಮ್ಮ ತಾಕತ್ತೇನು ಎಂಬುದನ್ನು ಸಾಬೀತುಪಡಿಸಲು ತಿಪ್ಪರಲಾಗ ಹಾಕುತ್ತಿದ್ದಾರೆ.
ಇನ್ನೇನು ಇಂದೋ, ನಾಳೆಯೋ ಬೆಂಗಳೂರಿಗೆ ಅಷ್ಟೂ ಶಾಸಕರನ್ನು ವಾಪಸು ಕರೆತಂದು 'ನಮಗೆ ಸಲ್ಲಬೇಕಾದ ಸಂಪುಟದ ಪಾಲಿನಲ್ಲಿ ಇವರ ಪೈಕಿ ನಾಲ್ಕು ಮಂದಿನ್ನು ಶಾಸಕರನ್ನಾಗಿ ಮಾಡಿ' ಎಂದು ಪಕ್ಷದ ನಾಯಕರ ಮುಂದೆ ಬಲಪ್ರದರ್ಶನಕ್ಕೆ ಯತ್ನಿಸಲಿದ್ದಾರೆ.
ಈ ಮಧ್ಯೆ, ರಾಜ್ಯ ಬಿಜೆಪಿಯೇನೋ 'ಕಳಂಕಿತರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಮುನ್ನ ಕಾನೂನು ಸಲಹೆ (ಅಡ್ವೊಕೇಟ್ ಜನರಲ್ ಎಜಿ ಬಿ.ವಿ. ಆಚಾರ್ಯ ಅವರಿಂದ) ಪಡೆಯುವುದಾಗಿ ಹೇಳಿ, ರೆಡ್ಡಿಗಳ ವಿಷಯದಲ್ಲಿ ಕೈತೊಳೆದುಕೊಳ್ಳುವ ಪ್ರಯತ್ನ ನಡೆಸಿತು. ಇದರ ಫಲಶೃತಿ ಏನಾಗಲಿದೆ ಎಂಬುದನ್ನು ಮುಂದಾಲೋಚಿಸಿದ ಜನಾರ್ದನ ರೆಡ್ಡಿ ತಕ್ಷಣ ಕಾರ್ಯಾಚರಣೆಗೆ ಇಳಿದರು.
'ಎಜಿ ಕಾನೂನು' ಪ್ರಕಾರ ಹೋದರೆ ತಾವು ಮತ್ತೆ ಸಚಿವರಾಗುವುದು ಕನಸಿನ ಮಾತೇ ಎಂಬುದು ಸ್ಪಷ್ಟವಾಗುತ್ತಿದ್ದಂತೆ (15 ಮಂದಿ) ಶಾಸಕರನ್ನು ತಮ್ಮ ವಶಕ್ಕೆ ತೆಗೆದುಕೊಡು ಬಿಜೆಪಿ ಮೇಲಿನ ತಮ್ಮ ಹಿಡಿತವನ್ನು ಬಿಗಿಗೊಳಿಸಿದರು.
ಆಚಾರ್ಯ ವರದಿ ವಿಳಂಬ ತಂತ್ರ: ಈ ಬೆಳವಣಿಗೆಗಳಿಂದ ಕಂಗಾಲಾಗಿರುವ ಬಿಜೆಪಿ, ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರಿಂದ ವರದಿ ಪಡೆಯುವುದಕ್ಕೆ ಮೀನಾಮೇಷ ಎಣಿಸುತ್ತಿದೆ. ದಿನಬೆಳಗಾಗುವುದರೊಳಗಾಗಿ ವರದಿ ಸಲ್ಲಿಸಲು ಎಜಿ ಸಿದ್ದವಿದ್ದರೂ 'ಇನ್ನೂ ಒಂದು ವಾರ ಕಾಲ ಮುಂದಕ್ಕೆ ತಳ್ಳಿ' ಎಂದು ಎಜಿಗೆ ಸೂಚಿಸಿದೆ. ರಡ್ಡಿಗಳು ತಣ್ಣಗಾದ ಮೇಲೆ ಮುಂದಿನ ಪರಿಸ್ಥಿತಿಯನ್ನು ನಿಭಾಯಿಸುವ ಎಂಬ ನಿಲುವಿಗೆ ಅಂಟಿಕೊಂಡಿದೆ.
ಈ ಮಧ್ಯೆ, ಸದಾನಂದ ಗೌಡರು ಇಂದು ಬೆಳಗ್ಗೆ ದೆಹಲಿ ವಿಮಾನ ಹತ್ತಿದ್ದಾರೆ. ಆದರೆ ರೆಡ್ಡಿಗಳ ಸಂಪುಟ ಸೇರ್ಪಡೆ ಬಗ್ಗೆ ವರಿಷ್ಠರ ಜತೆ ಚರ್ಚಿಸಲು ಅಲ್ಲ. ಮೆಟ್ರೋ ರೈಲು ಬಿಡಲು ಹೋಗಿದ್ದಾರೆ. ವರಿಷ್ಠರೂ ಸಹ ರೆಡ್ಡಿಗಳ ಸಿಂಗಾಪುರ ಪ್ರವಾಸದ ಬಳಿಕ ಅವರ ನಡೆಯೇನು ಎಂಬುದನ್ನು ಕಾದುನೋಡಿ, ಸೂಕ್ತ ನಿರ್ಧಾರಕ್ಕೆ ಬರುವ ನಿಲುವು ತಾಳಿದ್ದಾರೆ. ಒಟ್ಟಿನಲ್ಲಿ ಜನಾರ್ದನ ರೆಡ್ಡಿ ಮಾಡು ಇಲ್ಲವೇ ಮಡಿ ಎಂಬ ಹೋರಾಟದಲ್ಲಿ ತೊಡಗಿದ್ದಾರೆ.












Click it and Unblock the Notifications