ಆ.25ರಂದು ಸಂತ ಡಾನ್ ಬಾಸ್ಕೋ ಯಾತ್ರೆ ಶಿರ್ವಕ್ಕೆ
ಸಂತ ಡಾನ್ ಬಾಸ್ಕೊ ಸ್ಥಾಪಿಸಿದ ಸಾಲೇಶಿಯನ್ ಸಭೆಯು ಶತಮಾನೋತ್ತರ ಚಿನ್ನದ ವರ್ಷ (150 ವರ್ಷ) ಪೂರೈಸಿದ ಅಂಗವಾಗಿ ಇಟಲಿಯಿಂದ 2009ರಲ್ಲಿ ಹೊರಟಿರುವ ಪವಿತ್ರ ಯಾತ್ರೆ ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಆಗಮಿಸಿದೆ. ವಿಶ್ವದ ಸುಮಾರು 129 ರಾಷ್ಟ್ರಗಳಲ್ಲಿ ಸಂಚರಿಸುವ ಈ ಯಾತ್ರೆಯು ಏಳು ವರ್ಷಗಳ ಬಳಿಕ (2015) ಇಟಲಿಗೆ ಮರಳಲಿದೆ. ಈ ಯಾತ್ರೆಯು ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಸಂಚರಿಸಿದ ಬಳಿಕ ಆ. 17ರಂದು ಕರ್ನಾಟಕಕ್ಕೆ ಆಗಮಿಸಿದ್ದು ಆ. 25ರಂದು ಶಿರ್ವಕ್ಕೆ ಆಗಮಿಸಲಿದೆ.
ಶಿರ್ವ ಚರ್ಚ್ ಕಾರ್ಯಕ್ರಮದ ನಂತರ ಈ ಯಾತ್ರೆ ಬೆಳ್ತಂಗಡಿ, ಕಾಸರಗೋಡು, ಹಾಸನ ಜಿಲ್ಲೆಗಳ ಸಹಿತವಾಗಿ ಕರ್ನಾಟಕದ ಹತ್ತು ಕಡೆಗಳಿಗೆ ತೆರಳಲಿದೆ. ಈ ಯಾತ್ರೆಯನ್ನು ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ಅಲೋಶಿಯಸ್ ಪಾವ್ಲ್ ಡಿ'ಸೋಜಾ ಅವರ ನೇತೃತ್ವದಲ್ಲಿ ಸ್ವಾಗತಿಸಲಾಗುವುದು. ಯಾತ್ರೆಯ ಬಳಿಕ ಯುವಕರಿಗಾಗಿ ಬಿಷಪ್ ದಿವ್ಯ ಬಲಿಪೂಜೆ ನೆರವೇರಿಸುವರು.
ಎಲ್ಲ ಭಕ್ತರಿಗೆ ಸಂಜೆ 4 ಗಂಟೆಗೆ ಧರ್ಮ ಪ್ರಾಂತ್ಯದ ಗುರು ವಂ| ಡೆನಿಸ್ ಮೊರಾಸ್ ಪ್ರಭು ಬಲಿಪೂಜೆ ಅರ್ಪಿಸಲಿದ್ದಾರೆ. ಮಧ್ಯಾಹ್ನ ಯುವಕರಿಗೆ ಹಾಗೂ ಪಾಲನಾ ಮಂಡಳಿಯ ಸದಸ್ಯರಿಗೆ ವಿಶೇಷ ಪ್ರವಚನ ನಡೆಯಲಿದೆ. ಸಂಜೆ 6 ಗಂಟೆಯವರೆಗೆ ನಡೆಯುವ ಈ ಐತಿಹಾಸಿಕ ಯಾತ್ರೆಯಲ್ಲಿ ಡಾನ್ ಬಾಸ್ಕೊ ಅವರ ಪವಿತ್ರ ಕುರುಹುವಿನ ದರ್ಶನಕ್ಕೆ ಮುಕ್ತ ಅವಕಾಶವಿದೆ ಎಂದು ತಿಳಿಸಲಾಗಿದೆ.