ಅಪರಿಚಿತ ಶವ ಹಿಂದಿನ ಸಕತ್ ಮರ್ಡರ್ ಮಿಸ್ಟರಿ
ಕೊಲೆಯಾದ ಗೃಹಿಣಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೇರೂರು ಗ್ರಾಮದ ಮಹಾಲಕ್ಷ್ಮೀ ಯಾನೆ ದೀಪಾ (28). ಮಹಾಲಕ್ಷಿಯನ್ನು ಕಳೆದ ಎರಡು ವರ್ಷದ ಹಿಂದೆ ತರಿಕೆರೆ ತಾಲೂಕಿನ ಅಮೃತಪುರದ ಸುರೇಶ್ ಎಂಬಾತ ಎರಡನೇ ವಿವಾಹವಾಗಿದ್ದ.
ಇವರಿಗೆ ಮೂರು ತಿಂಗಳ ಮಗು ಸಹ ಇದೆ. ಸುರೇಶ್ ಮಹಾಲಕ್ಷ್ಮೀಯನ್ನು ತರಿಕೆರೆ ಸಮೀಪದ ಎಂಸಿ ಹಳ್ಳಿ ಎಂಬಲ್ಲಿ ಬಾಡಿಗೆ ಮನೆ ಮಾಡಿ ಇಟ್ಟಿದ್ದ. ಆದರೆ, ಸುಖಮಯ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ.
ಐಮೇಕ್ಸ್ ಸೋಲಾರ್ ಕಂಪನಿಯಲ್ಲಿ ಸುರೇಶ್ ಕೆಲಸ ಮಾಡುತ್ತಿದ್ದ. ದೀಪಾ ಹಾಗೂ ಸುರೇಶ್ ನಡುವೆ ಆಗಾಗ್ಗೆ ಸಣ್ಣಪುಟ್ಟ ವಿಷಯಕ್ಕೂ ಜಗಳ ನಡೆಯುತ್ತಲೇ ಇತ್ತು.
ಮೊದಲನೆ ಹೆಂಡತಿಯ ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಮ್ಮೆ ಜೈಲಿಗೂ ಹೋಗಿ ಬಂದಿದ್ದ ಸುರೇಶನಿಗೆ ದೀಪಾಳಿಂದಲೂ ವರದಕ್ಷಿಣೆ ಹಣ ಪಡೆಯುವ ಹುಚ್ಚು ಆಸೆ ಹುಟ್ಟಿಕೊಂಡಿತ್ತು. ಸಾಲದಕ್ಕೆ ಮಕ್ಕಳನ್ನು ಬೆಂಗಳೂರಿನ ಬೋರ್ಡಿಂಗ್ ಶಾಲೆಗೆ ಸೇರಿಸುವ ಬಗ್ಗೆ ಇಬ್ಬರಲ್ಲೂ ಮನಸ್ತಾಪವಾಗಿತ್ತು.
ಚೂರಿಕಟ್ಟೆ ಶಿವು ಸ್ಕೆಚ್ : ಜೈಲಿನಲ್ಲಿ ಸಾಗರ ತಾಲೂಲೂಕಿನ ಚೂರಿಕಟ್ಟೆ ಗ್ರಾಮದ ನಿವಾಸಿ ಶಿವು ಎಂಬಾತ ಪರಿಚಯವಾಗಿದ್ದ. ಶಿವುನನ್ನು ಸಂಪರ್ಕ ಮಾಡಿದ ಸುರೇಶ್ ತನ್ನ ಹೆಂಡತಿಯನ್ನು ಹೇಗಾದರೂ ಮಾಡಿ ಮುಗಿಸಬೇಕು ಎಂದು ಹೇಳಿಕೊಂಡಿದ್ದನು.
ಸುರೇಶ್ ಹಾಗೂ ಶಿವು ಇಬ್ಬರೂ ತರಿಕೆರೆಯ ಎಂಸಿಹಳ್ಳಿಗೆ ಬಂದು ದೀಪಾಳ ಮನೆಯಲ್ಲೇ ಉಳಿದುಕೊಂಡರು. ರಾತ್ರಿ ಮಹಾಲಕ್ಷ್ಮೀ ಮಲಗಿರುವ ಸಮಯ ನೋಡಿಕೊಂಡು ಅವಳನ್ನು ಉಸಿರುಗಟ್ಟಿಸಿ ಸಾಯಿಸಿ, ಶವವನ್ನು ಬಚ್ಚಿಟ್ಟಿದ್ದರು. ಕೆಲ ದಿನ ಬಿಟ್ಟು ಶವವನ್ನು ಬೈಕ್ ಮೇಲೆ ಸಾಗರ ಸಮೀಪದ ಉಳ್ಳೂರು ಕೆರೆಗೆ ತಂದು ಎಸೆದು ಹೋಗಿದ್ದಾರೆ.
ಅಪರಿಚಿತ ಶವದ ಬೆನ್ನು ಬಿದ್ದ ಪೊಲೀಸರಿಗೆ ದೀಪಾಳ ಗಂಡನ ಹಳೆ ಕೇಸ್ ಹಿಸ್ಟರಿ ತೆಗೆದಿದ್ದಾರೆ. ನಂತರ ಎಲ್ಲವೂ ಬೆಳಕಿಗೆ ಬಂದಿದೆ.