ಬಂಧನದ ಭೀತಿ : ನಿರೀಕ್ಷಣಾ ಜಾಮೀನಿಗೆ ಎಚ್ಡಿಕೆ ಅರ್ಜಿ

ಜಂತಕಲ್ ಮೈನಿಂಗ್ ಕಂಪನಿಗೆ ಗಣಿಗಾರಿಕೆ ನಡೆಸಲು ನೀಡಲಾಗಿದ್ದ ಅನುಮತಿಯನ್ನು ನವೀಕರಿಸಿದ ಮತ್ತು ವಿಶ್ವಭಾರತಿ ಹೌಸಿಂಗ್ ಕೋಆಪರೇಟಿವ್ ಸೊಸೈಟಿಗೆ 'ವೈಯಕ್ತಿಕ ಲಾಭ'ದ ಉದ್ದೇಶದಿಂದ ಭೂಮಿಯನ್ನು ನೀಡಿದ ಆರೋಪಗಳನ್ನು ಎಚ್ಡಿಕೆ ದಂಪತಿಗಳು ಹೊತ್ತಿದ್ದಾರೆ.
ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರಾಗಬೇಕೆಂದು ಆಗಸ್ಟ್ 8ರಂದು ಲೋಕಾಯುಕ್ತ ನ್ಯಾಯಾಧೀಶ ಎನ್ ಕೆ ಸುಧೀಂದ್ರ ಅವರು ಕುಮಾರಸ್ವಾಮಿ ಮತ್ತು ಅನಿತಾರಿಗೆ ಸಮನ್ಸ್ ಜಾರಿಮಾಡಿದ್ದರು. ಆಗಸ್ಟ್ 30ರಂದು ಕೋರ್ಟ್ ಮುಂದೆ ಹಾಜರಾಗಬೇಕೆಂದು ಅವರಿಗೆ ಆದೇಶಿಸಲಾಗಿದೆ.
ಗಣಿಗಾರಿಕೆಯ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಜಂತಕಲ್ ಗಣಿಗಾರಿಕೆ ಕಂಪನಿಯ ಅನುಮತಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನವೀಕರಿಸಿದ್ದರು ಎಂದು ನ್ಯಾಯವಾದಿ ವಿನೋದ್ ಕುಮಾರ್ ಎಂಬುವವರು ದೂರು ಸಲ್ಲಿಸಿದ್ದಾರೆ.
ಯಡಿಯೂರಪ್ಪ ಇನ್ನೂ ಆಸ್ಪತ್ರೆಯಲ್ಲಿ : ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ನಂತರ ಭ್ರಷ್ಟಾಚಾರ ಕಾಯ್ದೆಯಡಿ ಎರಡು ಮೊಕದ್ದಮೆಗಳನ್ನು ಮತ್ತು ಬಂಧನದ ಭೀತಿಯನ್ನು ಎದುರಿಸುತ್ತಿರುವ ಬಿಎಸ್ ಯಡಿಯೂರಪ್ಪ ಅವರು ಅತ್ಯಧಿಕ ರಕ್ತದೊತ್ತಡ ಕಾಯಿಲೆಯ ಕಾರಣ ಸಾಗರ್ ಅಪೋಲೊ ಆಸ್ಪತ್ರೆ ದಾಖಲಾಗಿದ್ದಾರೆ.
ಇಂದು ಮುಖ್ಯಮಂತ್ರಿ ಸದಾನಂದ ಗೌಡರು ಸಾಗರ್ ಅಪೋಲೊ ಆಸ್ಪತ್ರೆಗೆ ಭೇಟಿ ನೀಡಿ ಯಡಿಯೂರಪ್ಪನವರ ಆರೋಗ್ಯವನ್ನು ವಿಚಾರಿಸಿದರು. ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ಕೇಂದ್ರದ ಮಾಜಿ ಸಚಿವ ಮತ್ತು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಕೂಡ ಯಡಿಯೂರಪ್ಪನವರ ಉಭಯ ಕುಶಲೋಪರಿ ವಿಚಾರಿಸಿದರು.












Click it and Unblock the Notifications