ಸಾಲ ನೀಡಿ ಅಕ್ಕನ ಕೇಳಿದವನಿಗೆ ಬಿತ್ತು ಗೂಸಾ

ಗೌಸಿಯಾ ನಗರದ ನಿವಾಸಿ ಸಾಧಿಕ್ ಪಾಷಾ ಎಂಬಾತನೇ ಸಾರ್ವಜನಿಕರಿಂದ ಗೂಸಾ ತಿಂದ ವ್ಯಕ್ತಿಯಾಗಿದ್ದಾನೆ. ಕಳೆದ ಎರಡು ವರ್ಷದಿಂದ ಗೌಸಿಯಾ ನಗರದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿರುವ ಈತ, ಬಡವರಿಗೆ ಹಣ ನೀಡಿ ಅಸಲಿಗಿಂತಲೂ ದುಪ್ಪಟ್ಟು ಹಣವನ್ನು ಬಡ್ಡಿ ರೂಪದಲ್ಲಿ ವಸೂಲಿ ಮಾಡುತ್ತಿದ್ದನು.
ರಸ್ತೆ ಬದಿ ಹಾಗೂ ತಳ್ಳುಗಾಡಿಯಲ್ಲಿ ತರಕಾರಿ ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವವರಿಗೆ ಪ್ರತಿದಿನ ವ್ಯಾಪಾರಕ್ಕೆ ಹಣ ನೀಡಿ ಸಂಜೆಯಾಗುತ್ತಿದ್ದಂತೆಯೇ ಬಡ್ಡಿ ಸಹಿತ ಅಸಲು ಹಣವನ್ನು ಪಡೆಯುತ್ತಿದ್ದನು. ಬಡವರೊಂದಿಗೆ ಮಾತ್ರ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಈತ ಸಾವಿರ ರೂಪಾಯಿಗೆ ವಾರಕ್ಕೆ ನೂರು ರೂಪಾಯಿಯಂತೆ ಮೀಟರ್ ಬಡ್ಡಿ ವಸೂಲಿ ಮಾಡುತ್ತಿದ್ದನು. ಬಹಳಷ್ಟು ಮಂದಿ ತಾವು ಪಡೆದ ಅಸಲು ಹಣಕ್ಕಿಂತ ನಾಲ್ಕು ಪಟ್ಟು ಹಣವನ್ನು ಬಡ್ಡಿ ರೂಪದಲ್ಲಿಯೇ ನೀಡಿದ್ದಾರೆ.
ಸಾಧಿಕ್ ಪಾಷಾ ಕಳೆದ ಮೂರು ತಿಂಗಳಿಂದ ಬಡ್ಡಿ ಹಣವನ್ನು ಸರಿಯಾದ ಸಮಯಕ್ಕೆ ನೀಡದವರ ಮನೆಯ ಮುಂದೆ ತೆರಳಿ ಅವಾಚ್ಯ ಶಬ್ದಗಳಿಂದ ಬೈಯ್ಯುವುದರೊಂದಿಗೆ ಬಡ್ಡಿ ಹಣ ನೀಡಲಾಗದಿದ್ದರೆ ನಿಮ್ಮ ಮನೆ ಹೆಣ್ಣು ಮಕ್ಕಳನ್ನು ನನ್ನ ಹತ್ತಿರ ಕಳುಹಿಸಿ ಎಂಬುವುದಾಗಿ ಪೀಡಿಸುತ್ತಿದ್ದನು. ಸಾಲ ಪಡೆದ ತಪ್ಪಿಗೆ ಅವನು ಹೇಳಿದ್ದನ್ನು ಕೆಲವರು ಕೇಳಿಕೊಂಡಿದ್ದರು.
ಶನಿವಾರ ಅಸಿಫ್ ಎಂಬಾತ ಸಾಧಿಕ್ ಪಾಷಾನ ಬಳಿ ಬಡ್ಡಿಗೆ ಐದು ಸಾವಿರ ರೂಪಾಯಿಯ ಸಾಲವನ್ನು ಕೇಳಿದ್ದ. ಆತನಿಗೆ ಸಾಲ ಕೊಡಲು ಒಪ್ಪಿದ ಸಾಧಿಕ್ ಬಳಿಕ ನಿನ್ನ ತಂಗಿ ನನಗೆ ಚಿಕ್ಕವಳಾಗುತ್ತಾಳೆ. ಆದ್ದರಿಂದ ನಿನ್ನ ಅಕ್ಕನನ್ನು ನನ್ನ ಬಳಿ ಕಳುಹಿಸು ಮದುವೆಯಾಗುತ್ತೇನೆ ಎಂದಿದ್ದಾನೆ. ಆತನ ಮಾತಿನಿಂದ ಕೋಪಗೊಂಡ ಅಸಿಫ್ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದಾನೆ. ಇದೇ ರೀತಿ ಬೇರೆಯವರಿಗೂ ಹೇಳಿರುವುದು ತಿಳಿಯುತ್ತಿದ್ದಂತೆಯೇ ಸಾರ್ವಜನಿಕರು ಸಾಧಿಕ್ ನನ್ನು ನಡು ರಸ್ತೆಯಲ್ಲಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಮೈಸೂರಿನಲ್ಲಿ ಮೀಟರ್ ದಂಧೆ : ಮೈಸೂರಿನಲ್ಲಿ ಮೀಟರ್ ದಂಧೆಯಲ್ಲಿ ತೊಡಗಿಸಿಕೊಂಡಿರುವ ಸಾಧಿಕ್ ಪಾಷಾನಂತಹ ನೂರಾರು ಮಂದಿಯಿದ್ದು, ಈ ದಂಧೆ ಕಾನೂನು ಬಾಹಿರವೆಂದು ಗೊತ್ತಿದ್ದರೂ ಬಡವರಿಗೆ ಸಾಲ ನೀಡಿ ನೂರಕ್ಕೆ ಶೇಕಡ ಐದರಿಂದ ಹತ್ತು ರೂಪಾಯಿವರೆಗೆ ಬಡ್ಡಿ ಪಡೆಯುತ್ತಿದ್ದಾರೆ. ಈ ದಂಧೆಯಲ್ಲಿ ತೊಡಗಿಸಿಕೊಂಡವರು ಕ್ರಿಮಿನಲ್ ಹಿನ್ನೆಲೆಯವರು ಆದುದರಿಂದ ನಿರ್ದ್ಯಾಕ್ಷಿಣ್ಯವಾಗಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಬಹಳಷ್ಟು ಮಂದಿ ಸಾಲ ಪಡೆದ ತಪ್ಪಿಗೆ ಬಡ್ಡಿ ಕಟ್ಟುತ್ತಲೇ ಬರುತ್ತಿದ್ದಾರೆ. ರಸ್ತೆ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳು ತಳ್ಳುಗಾಡಿ ವ್ಯಾಪಾರಿಗಳು ಇವರ ಖಾಯಂ ಗಿರಾಕಿಗಳಾಗಿದ್ದಾರೆ. ಸಂಬಂಧಿಸಿದವರು ಇತ್ತ ಗಮನಹರಿಸದೆ ಮೌನವಾಗಿರುವುದರಿಂದ ರಾಜಾರೋಷವಾಗಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ.











Click it and Unblock the Notifications