ಯುಪಿಎ ಸರ್ಕಾರ ಅಣ್ಣಾ ಕಾಲಿಗೆ ಬಿದ್ದು ಕ್ಷಮೆ ಕೇಳಲಿ
ತುರ್ತು ಪರಿಸ್ಥಿತಿ ಗಿಂತಲೂ ಕಠೋರವಾದ ಕಾರ್ಯಾಚರಣೆ ನಡೆಸಿ, ಅಣ್ಣಾ ಅವರನ್ನು ಬಂಧಿಸುವ ಮೂಲಕ ಯುಪಿಎ ಸರ್ಕಾರ ತನ್ನ ಪತನಕ್ಕೆ ನಾಂದಿ ಹಾಡಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಜನಾಂದೋಲನವನ್ನು ಗೌರವಿಸದ ಕೇಂದ್ರ ಸರ್ಕಾರಇದ್ದರೆಷ್ಟು ಹೋದರೆಷ್ಟು. ಜನಲೋಕಪಾಲ್ ಬೇಕು ಎಂಬುದು ಇಡೀ ದೇಶದ ಜನರ ಅಪೇಕ್ಷೆ. ಭ್ರಷ್ಟಾಚಾರವನ್ನು ಪರೋಕ್ಷವಾಗಿ ರಕ್ಷಿಸುವುದು ಬೇಡ ಎಂದು ಸಿಎಂ ಡಿವಿಎಸ್ ಹೇಳಿದ್ದಾರೆ.
ಪ್ರಧಾನಿ ಸೇರಿದಂತೆ ದೇಶದ ಪ್ರತಿಯೊಬ್ಬ ಉದ್ದೇಶಿತ ಕಾಯ್ದೆ ವ್ಯಾಪ್ತಿ ಒಳಪಡಲು ಪಾರದರ್ಶಕವಾಗಿ ಜಾರಿಗೆ ತರಬೇಕು. ಹಜಾರೆ ಬಂಧನ ಸಂವಿಧಾನ ಬಾಹಿರವಾಗಿದ್ದು, ಕಟುವಾದ ಶಬ್ದಗಳಿಂದ ಟೀಕಿಸುತ್ತೇನೆ. ಭ್ರಷ್ಟಾಚಾರವನ್ನು ಗಟ್ಟಿದನಿಯಲ್ಲಿ ವಿರೋಧಿಸಬೇಕಿದೆ.
ರಾಜ್ಯದಲ್ಲೂ ಈ ಸಂಬಂಧ ಚಳುವಳಿ ನಡೆಯುತ್ತಿದ್ದು, ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಜಾರೆ ಹೋರಾಟದಿಂದ ಆಗುತ್ತಿರುವ ಪರಿಣಾಮವನ್ನು ಸೂಕ್ಷವಾಗಿ ಅವಲೋಕಿಸುತ್ತಿದ್ದು, ಸದ್ಯದಲ್ಲೇ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುವುದು ಎಂದರು.