ಮೈಸೂರಲ್ಲಿ ಮಗು ಕೆನ್ನೆ ಹರಿದು ತಿಂದ ಬೀದಿ ನಾಯಿ
ನಗರದ ಮಂಡಿಮೊಹಲ್ಲಾದ ಸೊಪ್ಪಿನಕೇರಿಯ ಒಂದನೇ ಕ್ರಾಸ್ನ ವೆಂಕಟೇಶ್ ಹಾಗೂ ಗೀತಾ ದಂಪತಿಗಳ ಒಂದೂವರೆ ವರ್ಷದ ನಿಖಿತಾ ಎಂಬ ಮಗು ಬೀದಿ ನಾಯಿ ದಾಳಿಗೆ ಸಿಲುಕಿದ್ದು, ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಎಂದಿನಂತೆ ಸೋಮವಾರ ಬೆಳಿಗ್ಗೆ ಮಗು ಮನೆಯಿಂದ ಹೊರಬಂದು ಆಟವಾಡುತ್ತಿತ್ತು. ಈ ಸಂದರ್ಭ ಬೀದಿ ನಾಯಿಯೊಂದು ಮಗುವಿನ ಮೇಲೆ ದಿಢೀರ್ ದಾಳಿ ಮಾಡಿ ಕೆನ್ನೆ ಮುಖಕ್ಕೆ ಕಚ್ಚಿದೆ. ನಾಯಿ ಕಚ್ಚಿದ್ದರಿಂದ ಗಾಯಗೊಂಡ ಮಗು ಹೆದರಿ ಕಿರುಚಿದೆ. ಮಗು ಕಿರುಚಿದ ಶಬ್ದಕ್ಕೆ ಮನೆಯೊಳಗಿದ್ದ ಪೋಷಕರು ಮಗುವಿನ ಬಳಿಗೆ ಬಂದು ನಾಯಿಯನ್ನು ಓಡಿಸಿ ಮಗುವನ್ನು ರಕ್ಷಿಸಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಉಪ ಮೇಯರ್ ರವಿಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರಲ್ಲದೆ, ಬಳಿಕ ಮಗು ಚಿಕಿತ್ಸೆ ದಾಖಲಾಗಿದ್ದ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಕೂಡಲೇ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.
ಹುಣಸೂರಿನಲ್ಲಿ ಹುಚ್ಚು ನಾಯಿ : ಹುಣಸೂರಿನಲ್ಲಿ ಕೂಡ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಭಾನುವಾರ ಹುಚ್ಚು ನಾಯಿಯೊಂದು ನಗರದ ಎಲ್ಲೆಡೆ ಸಂಚರಿಸುತ್ತಾ ಎದುರಿಗೆ ಸಿಕ್ಕವರ ಮೇಲೆ ದಾಳಿ ಮಾಡಿದೆ. ಈ ಹುಚ್ಚು ನಾಯಿಯ ದಾಳಿಗೆ ಸುಮಾರು 14 ಮಂದಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಚ್ಚು ನಾಯಿಯ ಉಪಟಳದಿಂದ ಆಕ್ರೋಶಗೊಂಡ ಸಾರ್ವಜನಿಕರು ನಾಯಿಯನ್ನು ಹುಡುಕಾಡಿದರಾದರೂ ಅದು ಜನರ ಕಣ್ಣಿಗೆ ಕಾಣದೆ ತಪ್ಪಿಸಿಕೊಂಡಿತ್ತು. ಆದರೆ ಎಲ್ಲೆಡೆ ಹುಡುಕಾಡಿದ ಜನರು ಸಂಜೆ ವೇಳೆಗೆ ಅದನ್ನು ಪತ್ತೆ ಹಚ್ಚಿ ಹೊಡೆದು ಸಾಯಿಸಿದ್ದಾರೆ.