ಪಾರ್ಕಿನಲ್ಲಿ ಚಕ್ಕಂದ ಆಕ್ಷೇಪಿಸಿದ್ದಕ್ಕೆ ಮೊಮ್ಮಗನೆದುರು ಅಜ್ಜನ ಹತ್ಯೆ

ಜೀವ ವಿಮಾ ನಿಗಮದ ನಿವೃತ್ತ ಅಧಿಕಾರಿ ಶ್ಯಾಂ ಪ್ರಸಾದ್ (65) ಅವರು ಗುರುವಾರ ರಾತ್ರಿ ಊಟ ಮಾಡಿದ ಬಳಿಕ ತಮ್ಮ ನಾಲ್ಕು ವರ್ಷದ ಮೊಮ್ಮಗನ ಸಂಗಡ ಮನೆಯ ಸಮೀಪದಲ್ಲೇ ಇರುವ ಪಾರ್ಕಿನಲ್ಲಿ ನಾಲ್ಕು ಹೆಜ್ಜೆ ಹಾಕಲು ಬಂದಿದ್ದರು. ಆಗ ಜೋಡಿಯೊಂದು ಸರಸ ಸಲ್ಲಾಪದಲ್ಲಿ ಮೈಮರೆತಿರುವುದು ಇವರ ಕಣ್ಣಿಗೆ ಬಿದ್ದಿದೆ. ಅದು ಅಬೋಧ ಬಾಲಕನಿಗೂ ಗೋಚರಿಸಿದೆ.
ಇದರಿಂದ ಕಸಿವಿಸಿಗೊಂಡ ಶ್ಯಾಮ್ ಕಾಮಕೇಳಿಯಲ್ಲಿದ್ದ ಜೋಡಿಯನ್ನು ಗದರಿಕೊಂಡಿದ್ದಾರೆ. ಅಷ್ಟಕ್ಕೆ ಸಿಟ್ಟಿಗೆದ್ದ ಯುವಕ ತನ್ನ ಬಳಿಯಿದ್ದ ಚಾಕು ತೆಗೆದುಕೊಂಡು ಶ್ಯಾಮ್ ಅವರನ್ನು ತಿವಿದಿದ್ದಾನೆ. ತೀವ್ರ ಆಘಾತಕ್ಕೊಳಗಾದ ಶ್ಯಾಮ್ ಸ್ಥಳದಲ್ಲಿಯೇ ಸಾವಿಗೀಡಾದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಶಾಹಿ ಹೇಳಿದ್ದಾರೆ. ಶ್ಯಾಮ್, ಮಗನ ಮನೆಯಲ್ಲಿ ವಾಸಿಸುತ್ತಿದ್ದರು.
ಶ್ಯಾಮ್ ಕೆಳಗೆ ಕುಸಿದುಬಿದ್ದು ಸಾವಿಗೀಡಾಗಿದ್ದನ್ನು ಕಂಡು ಗಾಬರಿಗೆ ಬಿದ್ದ ಜೋಡಿ ತಮ್ಮ ಬೈಕನ್ನು ಪಾರ್ಕಿನಲ್ಲೇ ಬಿಟ್ಟು, ಪರಾರಿಯಾಗಿದೆ. ಅವರೊಟ್ಟಿಗೆ ಇದ್ದ ಮತ್ತೊಬ್ಬ ಯುವತಿಯೂ ಪರಾರಿಯಾಗಿದ್ದಾಳೆ. ಬೈಕನ್ನು ವಶಪಡಿಸಿಕೊಂಡಿರುವ ಪೊಲೀಸರು ಹೇಯ ಕೃತ್ಯವೆಸಗಿರುವ ಜೋಡಿಯ ತಲಾಶೆಯಲ್ಲಿದ್ದಾರೆ.












Click it and Unblock the Notifications