ಬಿಎಸ್ ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ FIR

ಭದ್ರಾ ಮೇಲ್ದಂಡೆ ಯೋಜನೆ ಜಾರಿ ಅವ್ಯವಹಾರದಲ್ಲಿ 13 ಕೋಟಿ ರು ಕಿಕ್ ಬ್ಯಾಕ್ ಪಡೆದ ಆರೋಪ ಹೊರೆಸಿ ದತ್ತಾ ಅವರು ದೂರು ಸಲ್ಲಿಸಿದ್ದರು. ಎಫ್ ಐಆರ್ ಸಂಖ್ಯೆ 33/11 ಎಂದು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಭದ್ರಾ ಮೇಲ್ದಂಡೆ ಯೋಜನೆ ಜಾರಿ ಅವ್ಯವಹಾರದಲ್ಲಿ 13 ಕೋಟಿ ರು ಕಿಕ್ ಬ್ಯಾಕ್ ಹಣವನ್ನು ಯಡಿಯೂರಪ್ಪ ಪಡೆದಿದ್ದಾರೆ. ಧವಳಗಿರಿ ಹಾಗೂ ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆಗಳಿಗೆ ಈ ಹಣ ಸಂದಾಯವಾಗಿದೆ" ಎಂದು ದತ್ತಾ ಆರೋಪಿಸಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ಯಡಿಯೂರಪ್ಪ ಅವರನ್ನು ಬಂಧಿಸುವ ಅಧಿಕಾರ ಲೋಕಾಯುಕ್ತಕ್ಕೆ ಇದೆ. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಸ್ಪಷ್ಟಪಡಿಸಿಲ್ಲ. ಆರೋಪ ಸಾಬೀತಾದರೆ 1 ರಿಂದ 7 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಭೂ ಕಬಳಿಕೆ ಹಗರಣ : ಇನ್ನೊಂದು ಪ್ರಕರಣದಲ್ಲಿ ಶಿವಮೊಗ್ಗದ ವಕೀಲ ಸಿರಾಜಿನ್ ಬಾಷಾ ಹಾಗೂ ಕೆ.ಎನ್ ಬಾಲರಾಜ್ ಅವರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ (Prevention of Corruption Act) 1988ರ ಸೆಕ್ಷನ್ 19 (1) ಹಾಗೂ Criminal Procedure Code ಸಿಪಿಸಿ 1973ರ ಸೆಕ್ಷನ್ 197 ರ ಅನ್ವಯ ಕ್ರಿಮಿನಲ್ ಮೊಕದ್ದಮೆಯನ್ನು ಯಡಿಯೂರಪ್ಪ ಅವರ ಮೇಲೆ ಹೂಡಲಾಗಿದೆ.
ಈ ಪ್ರಕರಣ ಕುರಿತು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆ. 27ರಂದು ಕೋರ್ಟ್ ಗೆ ಹಾಜರಾಗುವಂತೆ ನ್ಯಾ.ಸುಧೀಂದ್ರರಾವ್ ಈಗಾಗಲೇ ಸಮನ್ಸ್ ನೀಡಿದ್ದಾರೆ.
ಇದೇ ವೇಳೆ, ಲೋಕಾಯುಕ್ತ ಎಫ್ ಐಆರ್ ಸುದ್ದಿ ತಿಳಿಯುತ್ತಿದ್ದಂತೆಯೇ ಯಡಿಯೂರಪ್ಪ ಬೆಂಬಲಿಗ ಸಮೂಹದ ಸಿ.ಟಿ ರವಿ ಹಾಗೂ ರೇಣುಕಾಚಾರ್ಯ ಮುಂತಾದ ಧುರೀಣರು ಯಡಿಯೂರಪ್ಪ ಅವರ ರೇಸ್ ಕೋರ್ಸ್ ನಿವಾಸಕ್ಕೆ ಧಾವಿಸಿದ್ದಾರೆ,
ಕಾಂಗ್ರೆಸ್ ಸ್ವಾಗತ: ಲೋಕಾಯುಕ್ತರ ಈ ಕ್ರಮವನ್ನು ನಾವು ನಿರೀಕ್ಷೆ ಮಾಡಿದ್ದೆವು. ಯಡಿಯೂರಪ್ಪ ಶೀಘ್ರದಲ್ಲೇ ಜೈಲು ಸೇರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಹಾರೈಸಿದ್ದಾರೆ.












Click it and Unblock the Notifications