ಕದ್ದ ಮಾಲು ಹೊಸಪೇಟೆಯಲ್ಲಿ ಸಿಕ್ಕಿದ್ದು ಹೇಗೆ?
ಆಭೂಷಣ್ ಜ್ಯುವೆಲರ್ಸ್ನಲ್ಲಿ ಕೋಟ್ಯಂತರ ರುಪಾಯಿ ಮೌಲ್ಯದ ವಜ್ರ, ಚಿನ್ನದ ಆಭರಣಗಳು ಕಳೆದ ಶುಕ್ರವಾರ ಕಳ್ಳತನವಾಗಿದ್ದವು. ನೌಕರ, ರಾಜಸ್ತಾನ ಮೂಲಕ ಸೋಹನ್ಲಾಲ್ನೇ ಆಭರಣಗಳನ್ನು ಕದ್ದಿರಬೇಕು ಎಂದು ಮಾಲೀಕರು ಮತ್ತು ಪೊಲೀಸರು ಶಂಕಿಸಿದ್ದರು. ಬೆಂಗಳೂರಿನ ಜಯನಗರದ ಪೊಲೀಸರು ಹೊಸಪೇಟೆಗೆ ಸೋಮವಾರ ಆಗಮಿಸಿ ಆಭರಣಗಳನ್ನು ಪರಿಶೀಲಿಸಿ ಹೊಸಪೇಟೆ ಪೊಲೀಸರ ಬಳಿ ಇದ್ದ ಆಭರಣಗಳು ಬೆಂಗಳೂರಿನ ಆಭೂಷಣ್ ಜ್ಯುವೆಲರಿಯವು ಎಂದು ಖಚಿತಪಡಿಸಿಕೊಂಡಿದ್ದಾರೆ.
ಶುಕ್ರವಾರ ಬೆಂಗಳೂರಿನಿಂದ ಮುಂಬೈಗೆ ವಿಆರ್ಎಲ್ ಬಸ್ನಲ್ಲಿ ತೆರಳಿದ್ದ ಸೋಹನ್ಲಾಲ್ ಕದ್ದ ಆಭರಗಣಗಳನ್ನು ಗೋಣಿಚೀಲಕ್ಕೆ ತುಂಬಿ ಚಾಲಕನ ಹಿಂದಿರುವ ಬಾಕ್ಸ್ಗೆ ಹಾಕಿದ್ದನು. ಬೆಂಗಳೂರು ಪೊಲೀಸರ ತನಿಖಾ ಮಾಹಿತಿಯನ್ನು ತಿಳಿದ ಆತನು ಮುಂಬೈಗೆ ಹೋಗದೇ ಪೂನಾದಲ್ಲಿ ಬಸ್ ಇಳಿದು ಹೋಗಿದ್ದನು. ಬಸ್ ಹೊಸಪೇಟೆಗೆ ಭಾನುವಾರ ಹಿಂದಿರುಗಿತ್ತು. ಹೊಸಪೇಟೆಯಲ್ಲಿ ಬಸ್ಸನ್ನು ಸ್ವಚ್ಛಗೊಳಿಸಲು ಕಾರ್ಮಿಕರು ಬಾಕ್ಸ್ ತೆರೆದಾಗ ಈ ಆಭರಣಗಳು ಸಿಕ್ಕಿವೆ.
ಈ ಕುರಿತು ಬಸ್ಸಿನ ಸಿಬ್ಬಂದಿಗಳು ಕೂಡಲೇ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಭರಣಗಳ ಗೋಣಿಚೀಲವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗೋಣಿ ಚೀಲದಲ್ಲಿ ವಜ್ರದ ಉಂಗುರ, ಓಲೆ, ಬಳೆ, ಪ್ಲಾಟಿನಿಯಂ ಬ್ರಾಸ್ಲ್ಶೆಟ್, ಚೈನು ಮತ್ತಿತರ ಚಿನ್ನದ ಅಭರಣಗಳಿದ್ದವು. ಈ ಆಭರಣಗಳ ಒಟ್ಟು ಮೌಲ್ಯ ಅಂದಾಜಿನಂತೆ 80 ಲಕ್ಷ ರುಪಾಯಿ. 1 ಕೋಟಿ 20 ಲಕ್ಷ ರುಪಾಯಿ ಮೌಲ್ಯದ ಆಭರಣಗಳು ಕಳ್ಳತನವಾಗಿವೆ. ವಜ್ರದ ಕೈ ಗಡಿಯಾರ ಹಾಗೂ ಚಿನ್ನ, ವಜ್ರದ ಪೆನ್ನು ಈ ಸಂಗ್ರಹದಲ್ಲಿ ಇಲ್ಲ.
ಬೆಂಗಳೂರಿನ ಜಯನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಡಿ.ಬಿ. ಬೋರಯ್ಯ, ಪೊಲೀಸ್ ಸಿಬ್ಬಂದಿಗಳಾದ ವಿ.ಎಂ.ರಾಜು, ವಿನಯ್, ಪುಟ್ಟಸ್ವಾಮಿ ಈ ಆಭರಣಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ಬೆಂಗಳೂರಿಗೆ ತೆರಳಿದ್ದಾರೆ. ಪೊಲೀಸರ ಈ ತಂಡದ ಜೊತೆಯಲ್ಲಿ ಅಭೂಷಣ್ ಜ್ಯುವೆಲರ್ಸ್ನ ಮಾಲೀಕರಾದ ಹರೀಶ್ ಕೊಚಾ, ಮುಖೇಶ್ ಭಾಗೆರೇಚಾ ಆಗಮಿಸಿ, ಅಭರಣಗಳನ್ನು ಗುರತಿಸಿದರು.
ಡಿವೈಎಸ್ಪಿ ಎಚ್.ಎಸ್.ಕೇರಿ, ಹಂಪೆ ಡಿವೈಎಸ್ಪಿ ರಶ್ಮಿ ಬಿ. ಪರಡ್ಡಿ, ಗ್ರಾಮೀಣ ಸಿಪಿಐ ಚಂದ್ರಶೇಖರ್ ಹಾಗೂ ಸಿಬ್ಬಂದಿ ಆಭರಣಗಳನ್ನು ಬೆಂಗಳೂರು ಪೊಲೀಸರಿಗೆ ಹಸ್ತಾಂತರಿಸಿದರು. ವಿಆರ್ಎಲ್ ಬಸ್ ಚಾಲಕ ಬಸವರಾಜ್ಗೆ ಬಹುಮಾನವನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದರು.