ಸಂಪುಟ ಮರುಪ್ರವೇಶಕ್ಕೆ ರೆಡ್ಡಿಗಳ ತೀವ್ರ ಯತ್ನ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸಿದ್ದೇವೆ. ಹೀಗಾಗಿ ಮಂತ್ರಿಗಳಾಗಿ ಮುಂದುವರಿಯುವ ಹಕ್ಕಿದೆ ಎಂದು ವಾದಿಸುತ್ತಿರುವ ಗಣಿ ರೆಡ್ಡಿಗಳು ಇದೇ ಕಾರಣಕ್ಕಾಗಿಯೇ ಕೊನೆಯ ಕ್ಷಣದಲ್ಲಿ ಯಡಿಯೂರಪ್ಪ ಬಣ ತೊರೆದು ಅನಂತಕುಮಾರ್ ಬಣ ಸೇರಿದರು ಎಂದು ತಿಳಿದುಬಂದಿದೆ.
ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ಅವರಲ್ಲದೆ, ಸಚಿವರಾದ ಗಾಲಿ ಜನಾರ್ದನರೆಡ್ಡಿ, ಗಾಲಿ ಕರುಣಾಕರರೆಡ್ಡಿ, ಬಿ. ಶ್ರೀರಾಮುಲು ಹಾಗೂ ವಿ. ಸೋಮಣ್ಣ ಅವರ ಹೆಸರನ್ನು ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ. ಈ ಹಿನ್ನೆಲೆಯಲ್ಲಿಯೇ ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಆದರೆ, ಯಡಿಯೂರಪ್ಪ ರಾಜೀನಾಮೆ ನಂತರ ಈ ನಾಲ್ವರು ಸಚಿವರ ಬಗ್ಗೆ ಬಿಜೆಪಿಯ ಯಾವೊಬ್ಬ ನಾಯಕರೂ ಚಕಾರ ಎತ್ತುತ್ತಿಲ್ಲ.
ತಮ್ಮ ಬೆನ್ನಿಗೆ ಸುಮಾರು 8ರಿಂದ 10 ಶಾಸಕರನ್ನು ಹೊಂದಿರುವ ಗಣಿರೆಡ್ಡಿಗಳು, ಸರ್ಕಾರದ ಮಟ್ಟಿಗೆ ತಾವೇ ನಿರ್ಣಾಯಕರು ಎಂಬ ನಿಲವಿಗೆ ಬಂದಿದ್ದಾರೆ. ಆದರೆ, ಗಣಿ ರೆಡ್ಡಿಗಳ ಸಂಪುಟ ಸೇರ್ಪಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಒಲವಿಲ್ಲ ಎನ್ನಲಾಗಿದೆ. ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರಿಂದ ವ್ಯಕ್ತವಾಗಬಹುದಾದ ಟೀಕೆಗಳ ಜತೆಗೆ ನೈತಿಕವಾಗಿಯೂ ರೆಡ್ಡಿಗಳಿಗೆ ಮಂತ್ರಿ ಸ್ಥಾನ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾಧ್ಯವಾದಷ್ಟು ಅವರ ಮನವೊಲಿಸಿ ಸಂಪುಟದಿಂದ ದೂರವಿಡುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ಗಣಿ ರೆಡ್ಡಿಗಳ ಮುಂದುವರಿಕೆಗೆ ಬಿಜೆಪಿ ಹೈಕಮಾಂಡ್ ಕೂಡ ಒಪ್ಪುವ ಸಾಧ್ಯತೆ ತೀರಾ ಕಡಮೆ ಎಂಬ ಮಾಹಿತಿ ದೊರೆತಿದೆ.
ಲೋಕಾಯುಕ್ತರ ವರದಿಯಲ್ಲಿ ಹೆಸರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಸಂಪುಟ ಸೇರ್ಪಡೆ ಸಾಧ್ಯವಾಗದಿದ್ದರೆ ತಮ್ಮ ಪರವಾಗಿ ಇಬ್ಬರು ಅಥವಾ ಮೂವರನ್ನು ಸಂಪುಟಕ್ಕೆ ಸೇರಿಸಲು ಗಣಿ ರೆಡ್ಡಿಗಳು ಮುಂದಾಗಿದ್ದಾರೆ. ಕೊನೆಯ ಕ್ಷಣದವರೆಗೂ ಪ್ರಯತ್ನಿಸಿ ತಮಗೆ ಅವಕಾಶ ನಿರಾಕರಿಸಲ್ಪಟ್ಟಲ್ಲಿ ಆಗ ತಮ್ಮ ನಿಷ್ಠಾವಂತ ಬೆಂಬಲಿಗರಾದ ವಿಧಾನಸಭಾ ಸದಸ್ಯ ಎಂ.ಎಸ್. ಸೋಮಲಿಂಗಪ್ಪ ಹಾಗೂ ವಿಧಾನಪರಿಷತ್ತಿನ ಸದಸ್ಯ ಮೃತ್ಯುಂಜಯ ಜಿನಗಾ ಅವರನ್ನು ಮಂತ್ರಿಗಳನ್ನಾಗಿ ಮಾಡುವ ಸಾಧ್ಯತೆಯಿದೆ.