ಯಡ್ಡಿ ನಂತರ ಬಜೆಟ್ ಮಂಡಿಸುವವರು ಯಾರು?

ಇದಕ್ಕೆ ಕಾರಣ ಇಲ್ಲದಿಲ್ಲ. ಕಳೆದ ಐದು ವರ್ಷಗಳಿಂದ ರಾಜ್ಯ ಬಜೆಟ್ ಮಂಡಿಸುತ್ತಿದ್ದ ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಸದಾನಂದ ಗೌಡ ಸಿಎಂ ಆದ ಮೇಲೆ ಕ್ಯಾಬಿನೆಟ್ ನಲ್ಲಿ ಮಹತ್ತರ ಬದಲಾವಣೆ ಆದರೂ ಆಗಬಹುದು. ಈ ಸಂಬಂಧ ಹೈಕಮಾಂಡ್ ನಿಂದ ಅವರಿಗೆ ತುರ್ತು ಬುಲಾವ್ ಕೂಡ ಬಂದಿದೆ. ಈಗ ಇರುವ ಸಚಿವರುಗಳಲ್ಲಿ ವಿತ್ತ ಖಾತೆಯನ್ನು ನಿಭಾಯಿಸುವಷ್ಟು ಪಾಂಡಿತ್ಯ ಯಾರಲ್ಲಿದೆ?
ಸಂಪುಟದಲ್ಲಿ ಇರುವ ಹಿರಿಯರೆಂದರೆ ಡಾ. ವಿಎಸ್ ಆಚಾರ್ಯ - ವೈದ್ಯಕೀಯ ಶಿಕ್ಷಣ, ಗೃಹ ಮತ್ತು ಮುಜರಾಯಿ ಸಚಿವರಾಗಿದ್ದ ಇವರಿಗೆ ವಿತ್ತ ಖಾತೆಯಲ್ಲಿ ಅನುಭವ ಕಮ್ಮಿ. ಮಿ. ಕ್ಲೀನ್ ಸುರೇಶ್ ಕುಮಾರ್ ಬಿಎಸ್ಸಿ ಮತ್ತು ಕಾನೂನು ಪಧವೀಧರರಾಗಿರುವ ಇವರು ಈವರೆಗೆ ಕಾನೂನು, ಪೌರಾಡಳಿತ ಖಾತೆ ನಿಭಾಯಿಸಿದ್ದಾರೆಯೇ ಹೊರತು ವಿತ್ತ ಖಾತೆಯಲ್ಲಿ ಅನುಭವದ ಕೊರತೆ.
ಇನ್ನು ಬಸವರಾಜ್ ಬೊಮ್ಮಾಯಿ, ಮುರುಗೇಶ್ ನಿರಾಣಿ, ಗೋವಿಂದ ಕಾರಿಜೋಳ, ರೇವೂ ನಾಯಕ್ ಬೆಳಮಗಿ, ವಿ ಸೋಮಣ್ಣ, ಲಕ್ಷ್ಮಣ್ ಸವದಿ, ಶೋಭಾ ಕರಂದ್ಲಾಜೆ ಮುಂತಾದವರು ಕೂಡ ವಿತ್ತ ಖಾತೆಯ ಸಚಿವರಾಗುವುದಕ್ಕೆ ಸೂಕ್ತ ಹೆಸರಲ್ಲ. ಅಬಕಾರಿ ಸಚಿವ ರೇಣುಕಾಚಾರ್ಯ ಬೇಡವೇ.. ಬೇಡ.
ಇನ್ನು ವಿರೋಧಿ ಬಣದಲ್ಲಿ ಕಾಣಿಸಿ ಕೊಳ್ಳುತ್ತಿರುವ ಅಶೋಕ್, ರಾಮದಾಸ್, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗದೀಶ್ ಶೆಟ್ಟರ್ ಮುಂತಾದವರು ಚಾಲ್ತಿ ಯಲ್ಲಿದ್ದರೂ ವಿತ್ತ ಖಾತೆ ನಿಭಾಯಿಸುವಷ್ಟು ಸಮರ್ಥರೆ ಎನ್ನುವುದೇ ಪ್ರಶ್ನೆ? ಬಿಕಾಂ, ಎಲ್ ಎಲ್ ಬಿ ಪಧವೀಧರರಾಗಿರುವ ಹಿರಿಯ ನಾಯಕ ಶೆಟ್ಟರ್ ಅವರು ಸಭಾಪತಿ, ಕಂದಾಯ, ಗ್ರಾಮೀಣಾಭಿವ್ರುದ್ದಿ ಖಾತೆಯನ್ನು ನಿರ್ವಹಿಸಿದ್ದರು. ಗೃಹ ಮತ್ತು ಸಾರಿಗೆ ಸಚಿವರಾದ ಅಶೋಕ್ ಸಮರ್ಥರಾದರೂ ವಿತ್ತ ಖಾತೆ ವಹಿಸಿಕೊಳ್ಳಲು ಅಸಮರ್ಥರೆನ್ನ ಬಹುದು.
ಇನ್ನು ಮುಖ್ಯಮಂತ್ರಿ ಸದಾನಂದ ಗೌಡ ಬಿಎಸ್ಸಿ, ಎಲ್ ಎಲ್ ಬಿ ಡಿಗ್ರಿ ಹೊಂದಿದ್ದಾರೆ. 2003 -2004 ರಲ್ಲಿ ರಾಜ್ಯ ಅಸೆಂಬ್ಲಿಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ಅಧ್ಯಕ್ಷರಾಗಿದ್ದರು. ವಿತ್ತ ಖಾತೆಗೆ ಸಂಬಂಧ ಪಟ್ಟಂತೆ ಇವರಿಗೆ ಇರುವ ಅನುಭವ ಇದು. ಒಟ್ಟಿನಲ್ಲಿ ಆಯಕಟ್ಟಿನ ಖಾತೆಯಾದ ವಿತ್ತ ಖಾತೆಗೆ ವರಿಷ್ಠರು ಅಂತಿಮವಾಗಿ ಯಾರ ಹೆಸರಿಗೆ ಮುದ್ರೆ ಒತ್ತುತ್ತಾರೆ ಎನ್ನುವುದು ಕುತೂಹಲದ ಪ್ರಶ್ನೆ.












Click it and Unblock the Notifications