ಕೇಳಿದ್ದು ಹಾಲು, ಗೌಡರಿಗೆ ಸಿಕ್ಕಿದ್ದು ಮಾತ್ರ ಜೇನು!

DV Sadananda Gowda and G Somashekhara Reddy
ಬಳ್ಳಾರಿ, ಆ. 4 : ರಾಜ್ಯದ ನೂತನ ಮುಖ್ಯಮಂತ್ರಿ ಅಭ್ಯರ್ಥಿ ಡಿ.ವಿ. ಸದಾನಂದ ಗೌಡ ಅವರು ಬಿ.ಎಸ್. ಯಡಿಯೂರಪ್ಪ ಅವರ ಬಳಿ ಪದೇ ಪದೇ ಅಂಗಲಾಚಿ ಬೇಡಿದ್ದು 'ಕರ್ನಾಟಕ ಹಾಲು ಒಕ್ಕೂಟ"ದ ಅಧ್ಯಕ್ಷ ಪದವಿಯನ್ನು. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಪಟ್ಟುಹಿಡಿದು ದೊರಕಿಸಿಕೊಟ್ಟಿದ್ದು ಮುಖ್ಯಮಂತ್ರಿ ಗದ್ದುಗೆ! ವಿಧಿಯ ಆಟ, ರಾಜಕೀಯ ಆಟ ಯಾವುದೇ ಅನ್ನಿ.

ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಕಾಲುಗಳಿಗೆ ಚಕ್ರಗಳನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಗೆಲ್ಲುವ - ಸಮರ್ಥ ಅಭ್ಯರ್ಥಿಗೆ ಟಿಕೆಟ್ ನೀಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಹಗಲಿರುಳೂ ಶ್ರಮಿಸಿದ್ದರು ಡಿವಿಎಸ್. ದಣಿವರಿಯದೇ ಪಕ್ಷಕ್ಕಾಗಿ ದುಡಿದಿದ್ದರು. ಸದಾ ಹಸನ್ಮುಖಿಯಾಗಿಯೇ ಪಕ್ಷವನ್ನು ಸಂಘಟಿಸಿ, ಬೆಳೆಸಿ ಅಧಿಕಾರಕ್ಕೆ ತಂದಿದ್ದರು.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ ಎಲ್.ಕೆ. ಅಡ್ವಾಣಿ ಅವರನ್ನು 'ಪ್ರಧಾನಮಂತ್ರಿ" ಮಾಡಲು ಹೆಣಗಾಡಿದ್ದರು. ಬಿ.ಎಸ್. ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ನೀಡಿದ ಮಾತಿನಂತೆ 18 ಬಿಜೆಪಿ ಸಂಸದರನ್ನು ಲೋಕಸಭೆಗೆ ಕಳುಹಿಸುವಲ್ಲಿ ಯಶಸ್ವಿಯಾದಾಗ ಡಿ.ವಿ. ಸದಾನಂದಗೌಡರು ಕೂಡ ಸಂಸತ್ತು ಪ್ರವೇಶಿಸಿದ್ದರು.

ಎಚ್.ಡಿ. ರೇವಣ್ಣ ಅವರ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷ ಪದವಿಯ ಅವಧಿ ಮುಗಿದ ನಂತರ ನೂತನ ಅಧ್ಯಕ್ಷ ಪದವಿಗಾಗಿ ಬಿಜೆಪಿಯಲ್ಲಿ ತೀವ್ರವಾದ ಬಿರುಸಿನ ಸ್ಪರ್ಧೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯ ಜಿ. ಸೋಮಶೇಖರರೆಡ್ಡಿ ಮತ್ತು ಸಂಸದ ಸದಾನಂದಗೌಡರ ಮಧ್ಯೆ ಏರ್ಪಟ್ಟಿತ್ತು. ಹಣ ಮತ್ತು ಲಾಬಿಯನ್ನು ಯಶಸ್ವಿಯಾಗಿ ನಡೆಸಿದ ಜಿ. ಸೋಮಶೇಖರರೆಡ್ಡಿ ಪಕ್ಷದ ಹಿರಿಯರು, ಮುಖಂಡರು ಮತ್ತು ವಿವಿಧ ಹಾಲು ಒಕ್ಕೂಟಗಳ ನಿರ್ದೇಶಕರ ಬೆಂಬಲ ಪಡೆಯುವಲ್ಲಿ ಯಶಸ್ವಿ ಆಗಿದ್ದರು. ಈ ವಿಚಾರದ ಸುಳಿವನ್ನು ಪಡೆದಿದ್ದ ಬಿ.ಎಸ್. ಯಡಿಯೂರಪ್ಪ ಅವರು ಡಿ.ವಿ. ಸದಾನಂದಗೌಡ ಅವರನ್ನು ಸಮಾಧಾನಿಸಿ '3 ತಿಂಗಳ ನಂತರ ನೀವೇ ಕೆಎಂಎಫ್ ಅಧ್ಯಕ್ಷರಾಗುತ್ತೀರಿ" ಎಂಬ ಭರವಸೆ ನೀಡಿ ಸ್ಪರ್ಧೆಯಿಂದ ಹಿಂದಕ್ಕೆ ಕರೆತಂದಿದ್ದರು.

ಜಿ. ಸೋಮಶೇಖರರೆಡ್ಡಿ ಅವರು ಕೆಎಂಎಫ್ ಅಧ್ಯಕ್ಷರಾದ ನಂತರ ವಿವಿಧ ಸಂದರ್ಭಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ 'ನಾನು ಕೆಎಂಎಫ್ ಅಧ್ಯಕ್ಷ ಪದವಿಯ ಅವಧಿಯನ್ನು ಪೂರ್ಣಗೊಳಿಸುತ್ತೇನೆ. ಯಾವುದೇ ಕಾರಣಕ್ಕೆ ಡಿ.ವಿ. ಸದಾನಂದಗೌಡ ಸೇರಿ ಯಾರೊಬ್ಬರಿಗೂ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಡುವುದಿಲ್ಲ" ಎಂದು ಹೇಳುವ ಮೂಲಕ, ಡಿ.ವಿ. ಸದಾನಂದಗೌಡರ ಆಸೆಗೆ ತಣ್ಣೀರು ಎರಚಿದ್ದರು.

ಅಷ್ಟೇ ಅಲ್ಲ, ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ನಡೆದ ರಾಜಕೀಯ ಪ್ರಹಸನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಜಿ. ಸೋಮಶೇಖರರೆಡ್ಡಿ ಅವರು ಡಿ.ವಿ. ಸದಾನಂದಗೌಡ ಅವರ ಕೆಎಂಎಫ್ ಅಧ್ಯಕ್ಷ ಪದವಿಯ ಆಸೆಗೆ ನಿರಾಸೆ ಮೂಡಿಸಿದ್ದರು. ಬಿ.ಎಸ್. ಯಡಿಯೂರಪ್ಪ ಅವರ ಸಮಾಧಾನದ ಮಾತುಗಳಿಗೆ ತೃಪ್ತಿಪಡುತ್ತಲಿದ್ದ ಡಿ.ವಿ. ಸದಾನಂದಗೌಡ ಅವರು ಕೆಎಂಎಫ್ ಅಧ್ಯಕ್ಷ ಪದವಿ ಕೈತಪ್ಪಿದ್ದಕ್ಕೆ ಎಲ್ಲಿಯೂ ಮಾಧ್ಯಮಗಳಲ್ಲಿ ಅಸಮಾಧಾನ ವ್ಯಕ್ತಪಡಿಸಲಿಲ್ಲ. ಸ್ವಾಮಿನಿಷ್ಠೆ ಮರೆಯಲಿಲ್ಲ.

ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಡಿ.ವಿ. ಸದಾನಂದಗೌಡ ಅವರಿಗೆ ಕೆಎಂಎಫ್ ಅಧ್ಯಕ್ಷ ಪದವಿಯನ್ನು ನೀಡಿಸಲಾಗದೇ ಅಸಹಾಯಕತೆ ತೋರಿದ್ದ ಬಿ.ಎಸ್. ಯಡಿಯೂರಪ್ಪ ಅವರೇ ಡಿವಿಎಸ್ ಅವರ ರಾಜಕೀಯ ಬದುಕಿನ ಮಹಾನ್ ತಿರುವಿಗೆ ಕಾರಣರಾಗಿದ್ದಾರೆ. ಸದಾನಂದಗೌಡ ಅವರ ಸ್ವಾಮಿನಿಷ್ಠೆಗೆ ತಕ್ಕ ಪದವಿ - ಹುದ್ದೆ, ನಿರೀಕ್ಷೆಗೂ ಮೀರಿದ ಕನಸನ್ನು ನನಸಾಗಿಸುವಲ್ಲಿ ಅಹರ್ನಿಶಿ ದುಡಿದಿದ್ದಾರೆ. ಯಡಿಯೂರಪ್ಪನವರ ದುಡಿಮೆಗೆ ಫಲ ಸಿಕ್ಕಿದೆ. ಸದಾನಂದಗೌಡ ಕೆಎಂಎಫ್ ಅಧ್ಯಕ್ಷರಾಗಿದ್ದಲ್ಲಿ ರಾಜ್ಯಾಧಿಕಾರದ ರಾಜಯೋಗ ಪ್ರಾಪ್ತಿ ಆಗುತ್ತಿತ್ತೋ ಇಲ್ಲವೋ ದೇವರೇ ಬಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+