ಯಡ್ಡಿ ನಿರ್ಗಮನ:ಶಿವಮೊಗ್ಗ ರಿಯಲ್ ಎಸ್ಟೇಟ್ ಢಮಾರ್!

ಶಿವಮೊಗ್ಗದಲ್ಲಿ ಕಳೆದ ವಾರದಿಂದಲೇ, ವ್ಯವಹಾರ ಸ್ಥಗಿತವಾಗಿದೆ. ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತಿದ್ದಂತೆ ರಿಯಲ್ ಎಸ್ಟೇಟ್ ವ್ಯವಹಾರದ ದಿಕ್ಕೇ ಬದಲಾಗುವ ಮುನ್ಸೂಚನೆಗಳು ಸಿಗಲಾರಂಭಿಸಿವೆ.
ಇದನ್ನು ಕಂಡು ಮಧ್ಯಮ ವರ್ಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಯಡಿಯೂರಪ್ಪ ಅವರ ಆರ್ಥಿಕ ಶಕ್ತಿ ಕೇಂದ್ರವಾಗಿದ್ದ ಜಿಲ್ಲೆಯಲ್ಲಿ ಒಂದು ಸೈಟು ಕೊಳ್ಳಲು ಹೆಣಗಾಡುತ್ತಿದ್ದ ಮಧ್ಯಮ ವರ್ಗದ ಜನತೆ ಈಗ ಸ್ವಂತ ನಿವೇಶನ ಖರೀದಿಯ ಕನಸು ಕಾಣುತ್ತಿದೆ.
ಭೂಮಿಗೆ ಬಂತು ಬಂಗಾರದ ಬೆಲೆ: ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ಅಭಿವೃದ್ಧಿ ಕಾರ್ಯದ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಬೂಮ್ ಪಡೆಯಿತು.
ನಗರದ ಹೊರವಲಯದಲ್ಲಿ ಹೊಸ ಹೊಸ ಲೇಔಟ್ಗಳು, ವಾಣಿಜ್ಯ ಕಟ್ಟಡಗಳು, ಕಾಲೋನಿಗಳು ನಿರ್ಮಾಣಗೊಂಡವು. ಆದರೆ, ದುರಂತವೆಂದರೆ ಶಿವಮೊಗ್ಗದಿಂದ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿಯ ಎಲ್ಲಾ ಭೂ ಪ್ರದೇಶ ಯಡಿಯೂರಪ್ಪ ಹಾಗೂ ಈಶ್ವರಪ್ಪ ಅವರ ಕಪಿಮುಷ್ಟಿ ಸೇರಿತ್ತು.
ಶಿಕ್ಷಣ ಸಂಸ್ಥೆಗಳ ಮೇಲೆ ಸಿಎಂ ಪರಿವಾರ ಪ್ರೇರಣಾ ಟ್ರಸ್ಟ್ ಅಧಿಕಾರ ಸ್ಥಾಪಿಸಿತ್ತು. ರೇಟು ಎಷ್ಟಿದೆ: ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮೊದಲಾದೆಡೆಯಿಂದಲೂ ರಿಯಲ್ ಎಸ್ಟೇಟ್ ಉದ್ಯಮಿಗಳು ಶಿವಮೊಗ್ಗಕ್ಕೆ ಆಗಮಿಸಿ ವ್ಯವಹಾರ ನಡೆಸಲು ಆರಂಭಿಸಿದರು.
3೦X40 ಸೈಟಿನ ಬೆಲೆ 10.5 ರಿಂದ 12 ಲಕ್ಷ ರೂ ತನಕ ಏರಿದೆ. ನಾಲ್ಕು ವರ್ಷದ ಕೆಳಗೆ ಲಕ್ಷಕ್ಕೆ ಒಂದು ಒಳ್ಳೆ ಸೈಟ್ ಸಿಗುತ್ತಿತ್ತು ಎಂದು ಸ್ಥಳೀಯ ರಿಯಲ್ ಎಸ್ಟೇಟ್ ಉದ್ಯಮಿ ರಾಜೇಶ್ ಹೇಳುತ್ತಾರೆ.
ಬಿಎಚ್ ರಸ್ತೆ, ನೆಹರೂ ರಸ್ತೆ ಸೇರಿದಂತೆ ಬೆಂಗಳೂರಿಗೆ ಮುಖ ಮಾಡಿರುವ ಪ್ರದೇಶಗಳಲ್ಲಿ ಬಂಗಾರದ ಬೆಳೆ ತೆಗೆದಿದ್ದ ಉದ್ಯಮಿಗಳು ಇಂದು ಕಂಗಾಲಾಗಿದ್ದಾರೆ. ಅಡಿಕೆ ಬೆಳೆಗಾರರಿಗೆ ಮಾತ್ರ ಸೀಮಿತವಾಗಿ ಮಲ್ನಾಡ್ ಪ್ರದೇಶದ ಭೂ ಖರೀದಿ ವ್ಯವಹಾರಕ್ಕೆ ಇಂದು ರಾಜಕಾರಣಿಗಳು ನೇರವಾಗಿ ಇಳಿದಿದ್ದಾರೆ.
ರೆಸಾರ್ಟ್, ಸ್ಟಾರ್ ಹೋಟೆಲುಗಳು, ಕಾಂಪ್ಲೆಕ್ಸ್, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಖಾಸಗಿ ಬಂಗಲೆಗಳು ತಲೆ ಎತ್ತಿವೆ. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಸುದ್ದಿ ದೃಢವಾದ ನಂತರ ರಿಯಲ್ ಎಸ್ಟೇಟ್ ಇನ್ನಷ್ಟು ಚೇತರಿಕೆ ಕಂಡಿತ್ತು.
ಹಸಿರಿನ ಮಧ್ಯೆ ಸದಾ ನಿದ್ರೆಯಲ್ಲಿದ್ದ ಶಿಕಾರಿಪುರದಲ್ಲಿ ಸದಾ ಹೂಡಿಕೆದಾರರ ಚಟುವಟಿಕೆ ತಾಣವನ್ನಾಗಿ ಯಡಿಯೂರಪ್ಪ ಸೃಷ್ಟಿಸಿದರು. ಚದರ ಅಡಿಗೆ 100 ರು ಇದ್ದದ್ದು 500/1000 ರು ತನಕ ಏರಿಕೆ ಕಂಡಿತು. ಕೃಷಿ ಭೂಮಿಗೆ 1/2 ಲಕ್ಷ ರು ತಗುಲುತ್ತಿದ್ದದ್ದು ಈಗ 15 ರಿಂದ 20 ಪಟ್ಟು ಏರಿಕೆ ಕಂಡು ಭರ್ಜರಿ ಮಾರಾಟ ಕಾಣುತ್ತಿದೆ.
ಈಗ ಯಡಿಯೂರಪ್ಪ ಅವರ ಪತನ ನಂತರ ಒಂದು ವೇಳೆ ಈಶ್ವರಪ್ಪ ಅವರು ಸಿಎಂ ಆದರೆ ಮತ್ತೆ ರಿಯಲ್ ಎಸ್ಟೇಟ್ ಚಿಗುರೊಡೆಯಬಹುದು. ಇಲ್ಲದಿದ್ದರೆ, ರಿಯಲ್ ಎಸ್ಟೇಟ್ ಕುಸಿತ ಖಂಡಿತ. ಆಗ ಮಧ್ಯಮ ವರ್ಗಕ್ಕೆ ಭಾಗ್ಯದ ಬಾಗಿಲು ತೆರೆಯುತ್ತದೆ.












Click it and Unblock the Notifications