ಹರ್ಯಾಣ ರಾಜೀವ್ ಗಾಂಧಿ ಟ್ರಸ್ಟ್ನಿಂದಲೂ ಭೂ ಕಬಳಿಕೆ
ಇದೆಲ್ಲ ಜೀವಂತವಿರುವವರು ಹಲ್ಕಟ್ ಕೆಲಸಗಳಾದವು. ಸತ್ತವರ ಹೆಸರು ಹೇಳಿಕೊಂಡೂ ಭೂಮಿಯನ್ನು ದೋಚುವವರು ಇದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮಾಜಿ ಪ್ರಧಾನಿ, ದಿ. ರಾಜೀವ್ ಗಾಂಧಿ ಅವರ ಕುಟುಂಬ.
ಹರಿಯಾಣದಲ್ಲಿ ರಾಜೀವ್ ಗಾಂಧಿ ಚಾರಿಟೆಬಲ್ ಟ್ರಸ್ಟ್ ಹೆಸರಿನ ಸಂಸ್ಥೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಟ್ರಸ್ಟಿಗಳು. ಈ ಟ್ರಸ್ಟ್ಗೆ ಗುರಗಾಂವ್ ಬಳಿಯ ಉಲ್ವಾಸ್ ಎಂಬ ಗ್ರಾಮದಲ್ಲಿ 8 ಎಕರೆ ಜಮೀನನ್ನು ಅಕ್ರಮವಾಗಿ ನೀಡಲಾಗಿರುವ ಸಂಗತಿ ಈಗ ಬೆಳಕಿಗೆ ಬಂದಿದೆ. ಹರಿಯಾಣದ ಭೂಪಿಂದರ್ ಸಿಂಗ್ ಹೂಡಾ ಸರ್ಕಾರವು ನಿಯಮಗಳನ್ನು ಮೀರಿ 8 ಎಕರೆ ಜಮೀನನ್ನು ರಾಜೀವ್ ಟ್ರಸ್ಟ್ಗೆ ನೀಡಿದೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಜೀವ್ ಗಾಂಧಿ ಪ್ರತಿಷ್ಠಾನವು ಈ 8 ಎಕರೆ ಜಾಗೆಯಲ್ಲಿ ಇಂದಿರಾ ಗಾಂಧಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿತ್ತು. ಆದರೆ ಮೂಲ ಭೂಮಾಲೀಕರಿಂದ ಹೂಡಾ ಸರ್ಕಾರ ಒತ್ತಾಯದಿಂದ ಜಮೀನು ಪಡೆದಿದೆ ಎಂದು ಭೂಮಿಯ ಮೂಲ ಒಡೆಯರು ದಾವೆ ಹೂಡಿದ್ದರು. ಪ್ರತಿಷ್ಠಿತ ಗಾಂಧಿ ಕುಟುಂಬ ಈ ಟ್ರಸ್ಟಿನಲ್ಲಿ ಇದ್ದ ಕಾರಣ, ಭೂಸ್ವಾಧೀನ ಅಕ್ರಮವಾಗಿದೆ ಎಂದು ಗೊತ್ತಿದ್ದರೂ ಅದನ್ನು ಮುಚ್ಚಿಹಾಕಲು ಸರ್ಕಾರ ನಾನಾ ರೀತಿಯ ಸರ್ಕಸ್ ನಡೆಸಿತು.
ಭೂಮಾಲೀಕರ ಮೇಲೆ ಸತ್ಯ ಮುಚ್ಚಿಡುವಂತೆ ಸಾಕಷ್ಟು ಒತ್ತಡ ಹೇರಿತು. ಒಂದು ವೇಳೆ ಭೂಸ್ವಾಧೀನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ವಿವಿಧ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ಅಟ್ಟುವ ಬೆದರಿಕೆಯನ್ನೂ ಹಾಕಲಾಯಿತು ಎಂದು ಉಲ್ವಾಸ್ ಗ್ರಾಮಸ್ಥರು ಕೋರ್ಟಿನಲ್ಲಿ ಅಳಲು ತೋಡಿಕೊಂಡಿದ್ದರು. ವಾದವನ್ನು ಆಲಿಸಿದ ಹರ್ಯಾಣ ಉಚ್ಚ ನ್ಯಾಯಾಲಯ, ಹೂಡಾ ಸರ್ಕಾರವನ್ನು ಸೋಮವಾರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.