ಜಿಂದಾಲ್ ವಿಷಾನಿಲ ಸೋರಿಕೆ: ಇಂಜಿನಿಯರ್ ಸೇರಿ 3 ಸಾವು
ಮೃತರು ಜಗಳೂರು ನಿವಾಸಿ ಜಿಂದಾಲ್ನ ಉದ್ಯೋಗಿ, ಇಂಜಿನಿಯರ್ ಪ್ರಶಾಂತ್ (28), ಆರ್ಟಿಎಫ್ ಕಂಪನಿಯಿಂದ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ಹೆಲ್ಪರ್ಗಳಾದ ವಡ್ಡು ಗ್ರಾಮ ನಿವಾಸಿ ಮಲ್ಲಿಕಾರ್ಜುನ (29) ಮತ್ತು ಸಂಡೂರು ನಿವಾಸಿ ಮಂಜುನಾಥ (28).
ಜಿಂದಾಲ್ನ ಬ್ಲಾಸ್ಟ್ಫರ್ನೇಸ್ ಘಟಕ 2ರಲ್ಲಿ ಮಂಗಳವಾರ ನಸುಕಿನ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ವಿಷಾನಿಲ ಸೋರಿಕೆಯ ಕಾರಣ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟಕದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ತಜ್ಞರು ತಿಳಿಸಿದ್ದಾರೆ.
ಈ ಘಟನೆಯಿಂದ ಕಾರ್ಮಿಕರು ಉದ್ರಿಕ್ತರಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕಾರ್ಖಾನೆಯ ಆಡಳಿತ ಮಂಡಳಿ ಕೈಗೊಂಡಿದೆ. ಅಲ್ಲದೇ ಜಿಂದಾಲ್ ಕಂಪನಿಯ ಮುಂದೆ ಮೀಸಲು ಸಶಸ್ತ್ರಪಡೆಯ ಒಂದು ತುಕಡಿಯನ್ನು ನೇಮಿಸಲಾಗಿದೆ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.