ಇಷ್ಟಕ್ಕೂ ಕಾಂಗ್ರೆಸ್ಸಿಗರು ಚಾಮುಂಡಿಬೆಟ್ಟದ ಮೆಟ್ಟಿಲು ತೊಳೆದಿದ್ದು ಏಕೆ!?
ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದ್ದು ಇಡೀ ರಾಜ್ಯವೇ ಅಪವಿತ್ರವಾಗಿದೆ. ಹೀಗಿರುವಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರು ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಮಹಿಳಾ ಕಾಂಗ್ರೆಸ್ಸಿಗರು ಶೋಭಾ ಕರಂದ್ಲಾಜೆ ಹತ್ತಿದ ಮೆಟ್ಟಿಲುಗಳನ್ನು ತೊಳೆದು ಸ್ವಚ್ಛಗೊಳಿದ್ದಾರೆ.
ಮಂಗಳವಾರ ಚಾಮುಂಡಿಬೆಟ್ಟದ ಪಾದದ ಬಳಿ ಜಮಾಯಿಸಿದ ಮಹಿಳಾ ಕಾಂಗ್ರೆಸ್ನ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕಾಂಗ್ರೆಸ್ನ ಹಲವು ಮುಖಂಡರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗತೊಡಗಿದರು. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಅಕ್ರಮ ಗಣಿಗಾರಿಕೆ, ಭೂ ಹಗರಣ ಸೇರಿದಂತೆ ಹಲವು ಅಕ್ರಮಗಳಲ್ಲಿ ತೊಡಗಿಕೊಂಡು ಕರ್ನಾಟಕದ ಗೌರವಕ್ಕೆ ಧಕ್ಕೆ ತಂದಿದೆ. ಇಂತಹವರು ಚಾಮುಂಡಿಬೆಟ್ಟಕ್ಕೆ ಕಾಲಿಡುವ ಮೂಲಕ ಇಲ್ಲಿನ ಪಾವಿತ್ರ್ಯ ಹಾಳು ಮಾಡಿದ್ದಾರೆ ಎಂದು ಶುದ್ಧ ನೀರಿನಿಂದ ಬೆಟ್ಟದ ಮೆಟ್ಟಿಲನ್ನು ತೊಳೆದು ಸ್ವಚ್ಛಗೊಳಿಸಿದರು.
ಬಳಿಕ ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆಯನ್ನೂ ನಡೆಸಿದರು. ಪ್ರತಿಭಟನೆಯ ಸಂದರ್ಭ ಪಕ್ಷದ ಮುಖಂಡರು, ಪದಾಧಿಕಾರಿಗಳು ಸೇರಿದಂತೆ ಸುಮಾರು ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಂಡಿದ್ದರು.