ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ತನಿಖೆ ಅಬಾಧಿತ
ವಕೀಲ ಸಿರಾಜಿನ್ ಬಾಷಾ ದಾಖಲಿಸಿರುವ ದೂರನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಫೆ. 26ರಂದು ವಿಚಾರಣೆಗೆ ಅಂಗೀಕರಿಸಿರುವುದನ್ನು ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಎತ್ತಿ ಹಿಡಿದಿದ್ದಾರೆ. ಸೋಹನ್ ಕುಮಾರ್ ಅವರ ಅರ್ಜಿಯನ್ನು ವಜಾಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಷಾ ಹಾಗೂ ಮುಖ್ಯಮಂತ್ರಿ, ಸೋಹನ್ಕುಮಾರ್ ನಡುವೆ ಇರುವ ಕಾನೂನು ಸಮರ ಪುನಃ ವಿಶೇಷ ಕೋರ್ಟ್ ಅಂಗಳಕ್ಕೆ ಹೋಗಿದೆ.
ಫೆ. 26ರ ಆದೇಶ ಪ್ರಶ್ನಿಸಿ ಸೋಹನ್ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮಾರ್ಚ್ 29ರಂದು ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ತಡೆಯಾಜ್ಞೆಯನ್ನು ಪ್ರಶ್ನಿಸಿ ಬಾಷಾ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ವಿವಾದವನ್ನು ಹೈಕೋರ್ಟ್ನಲ್ಲಿಯೇ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಏ. 29ರಂದು ನಿರ್ದೇಶಿಸಿತ್ತು. ಈ ನಿರ್ದೇಶನದ ಅನ್ವಯ ವಿಚಾರಣೆ ನಡೆಸಿರುವ ಹೈಕೋರ್ಟ್ ಈ ತೀರ್ಪು ನೀಡಿದೆ.
'ಬಾಷಾ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳು ಹಾಗೂ ಲೋಕಾಯುಕ್ತ ಕೋರ್ಟ್ನಲ್ಲಿ ತಿಳಿಸಿರುವ ಅಂಶಗಳಿಗೂ ಬಹಳ ವ್ಯತ್ಯಾಸ ಇದೆ. ಇದನ್ನು ಗಮನಿಸದೆ ಕೋರ್ಟ್ ವಿವೇಚನಾರಹಿತವಾಗಿ ಆದೇಶ ಹೊರಡಿಸಿದೆ ಎನ್ನುವ ಅರ್ಜಿದಾರರ ಆರೋಪಗಳಲ್ಲಿ ಸತ್ಯಾಂಶ ಇಲ್ಲ. ಎಲ್ಲ ರೀತಿಯಿಂದಲೂ ಕೋರ್ಟ್ ಪರಿಶೀಲನೆ ನಡೆಸಿದ ಬಳಿಕವೇ ದೂರನ್ನು ವಿಚಾರಣೆಗೆ ಅಂಗೀಕರಿಸಿದೆ. ವಿಚಾರಣೆ ಮುದುವರಿಯಲಿ' ಎಂದು ಕೋರ್ಟ್ ಚಾಟಿಯೇಟು ಬೀಸಿದೆ.