ಲೋಕಾಯುಕ್ತ ವರದಿ ಲೀಕ್ ಮುಂದೇನು? ತಜ್ಞರನ್ನು ಕೇಳಿ

ಲೋಕಾಯುಕ್ತರು ಅಕ್ರಮ ಗಣಿಗಾರಿಕೆ ಕುರಿತ ಮೊದಲ ವರದಿ 2008ರಲ್ಲಿ ನೀಡಿದ್ದರು. ಈಗ ಲೀಕ್ ಆಗಿರುವುದು ಎರಡನೇ ವರದಿ. ಈಗ ಸೋರಿಕೆಯಾಗಿರುವ ಭಾಗ ಕೆಲ ಅಂಶಗಳನ್ನು ಮಾತ್ರ ಒಳಗೊಂಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಾಲ್ವರು ಸಂಪುಟ ಸದಸ್ಯರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಸಂಸದ ಅನಿಲ್ ಲಾಡ್ ಹೆಸರು ಬಹಿರಂಗವಾಗಿದೆ.
2008 ರ ವರದಿಯಲ್ಲಿ ಪ್ರಮುಖ ಆರೋಪಿಯಾಗಿದ್ದ ಧರಂ ಸಿಂಗ್ ಅವರಿಗೆ ಯಾವುದೇ ಶಿಕ್ಷೆ ವಿಧಿಸುವಲ್ಲಿ ಇದೇ ಬಿಜೆಪಿ ಸರ್ಕಾರ ವಿಫಲವಾಗಿದೆ. ಅದಿರು ರಫ್ತು ನಿಷೇಧ ಹೇರಿದ್ದು ಬಿಟ್ಟರೆ ಇನ್ನೇನೂ ಆಗಿಲ್ಲ.
ಲೀಕ್ ಆಗಿರುವುದರಿಂದ ವರದಿ ಸತ್ಯಾಸತ್ಯತೆಗೆ ಯಾವುದೇ ತೊಂದರೆಯಿಲ್ಲ. ವರದಿಯನ್ನು ಯಾರೊಬ್ಬರು ತಿರಸ್ಕರಿಸಲು ಸಾಧ್ಯವಿಲ್ಲ. ಸುಮಾರು 8000 ಪುಟಗಳ ವರದಿಯಲ್ಲಿ ಕೆಲ ಭಾಗ ಮಾತ್ರ ಸೋರಿಕೆಯಾಗಿದೆ. ಆರೋಪಿತರ ಮೇಲೆ ಕಾನೂನು ಕ್ರಮ ಜಾರಿಗೊಳಿಸಬಹುದು.
ಫೋನ್ ಟ್ಯಾಪಿಂಗ್ ಮೂಲಕ ವರದಿ ಲೀಕ್ ಆಗುವಂತೆ ಸರ್ಕಾರವೇ ಮಾಡಿರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ತಮ್ಮ ಫೋನ್ ಕದ್ದಾಲಿಕೆ ಬಗ್ಗೆ ಮುಂಚಿತವಾಗಿ ಅನುಮಾನ ವ್ಯಕ್ತ ಪಡಿಸಿದ್ದರು ಎನ್ನಲಾಗಿದೆ.
ಅಧಿಕಾರ ಅವಧಿ ಮುಗಿದ ನಂತರ ತಮ್ಮ ಮೊಬೈಲ್ ಸಿಮ್ ಅನ್ನು ಸರ್ಕಾರಕ್ಕೆ ಹಸ್ತಾಂತರಿಸುವುದಾಗಿ ಸಂತೋಷ್ ಹೆಗ್ಡೆ ಹೇಳಿದ್ದಾರೆ. ಫೋನ್ ಟ್ಯಾಪಿಂಗ್, ಸರ್ಕಾರ ತಮ್ಮ ಮೇಲೆ ನಡೆಸಿದ ಬೇಹುಗಾರಿಕೆ, ಸಚಿವರ ಮೂಲಕ ಹೇರಲಾದ ಒತ್ತಡ ಮುಂತಾದ ವಿಷಯಗಳ ಮೇಲೆ ಪ್ರತ್ಯೇಕ ದೂರು ನೀಡುವ ಅವಕಾಶ ಕೂಡಾ ಇದೆ ಎಂದು ಕಾನೂನು ತಜ್ಞ ರವಿಕುಮಾರ್ ವರ್ಮ ಹೇಳಿದ್ದಾರೆ.











Click it and Unblock the Notifications