ಅಕ್ರಮ ಗಣಿಗಾರಿಕೆ ವರದಿ ಸೋರಿಕೆ, ಕಳ್ಳರ ಹೆಸರು ಲೀಕ್!
ಅಕ್ರಮ ಗಣಿಗಾರಿಕೆಯ ರೂವಾರಿಯೆನ್ನಲಾಗಿರುವ ಬಿಜೆಪಿಯ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಶ್ರೀರಾಮುಲು, ವಿ ಸೋಮಣ್ಣ, ಕಾಂಗ್ರೆಸ್ ನ ಅನಿಲ್ ಲಾಡ್ ಹೆಸರು ಕೂಡ ಪ್ರಸ್ತಾಪವಾಗಿದೆ. ಯಾವುದೇ ಒಂದು ಪಕ್ಷದ ವಿರುದ್ಧ ಬೆರಳೆತ್ತಿ ತೋರಿಸದಂತೆ ಎಲ್ಲ ಪಕ್ಷಗಳ ಧುರೀಣರ ಹೆಸರುಗಳು ಪ್ರಸ್ತಾಪವಾಗಿವೆ. ಆದರೆ, ಬಿಜೆಪಿ ಬಹುಪಾಲು ಪಡೆದಿದೆ. ಈ ಸೋರಿಕೆಯಾಗಿರುವ ವರದಿ ನಿಜವೇ ಆಗಿದ್ದರೆ ಬಿಜೆಪಿ ಸರಕಾರಕ್ಕೆ ಮುಳುಗು ನೀರಾಗುವುದರಲ್ಲಿ ಸಂದೇಹವೇ ಇಲ್ಲ.
ಅಕ್ರಮ ಗಣಿಗಾರಿಕೆ ನಡೆಸುವವರ ಪಾಲಿನ ಕಂಟಕವಾಗಿದ್ದ ನ್ಯಾ. ಸಂತೋಷ್ ಹೆಗಡೆ ಅವರು ಆಗಸ್ಟ್ 2ರಂದು ನಿವೃತ್ತರಾಗುತ್ತಿದ್ದಾರೆ. ಜುಲೈ 23ರಂದು 9000 ಪುಟಗಳ ಬೃಹತ್ ವರದಿಯನ್ನು ಅವರು ಸರಕಾರಕ್ಕೆ ಸಲ್ಲಿಸುವವರಿದ್ದರು. ಈಗ ಅವಧಿಗೆ ಮುನ್ನವೇ ವರದಿ ಬಹಿರಂಗವಾಗಿದೆ. ವರದಿ ಸೋರಿಕೆಯಾಗಿದ್ದಕ್ಕೆ ಹೆಗಡೆಯವರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೋರಿಕೆಯಾಗಿದ್ದು ತಮ್ಮ ಕಚೇರಿಯಿಂದ ಅಲ್ಲ ಎಂಬ ಮಾತನ್ನೂ ಅವರು ಹೇಳಿದ್ದಾರೆ.
ಯಡಿಯೂರಪ್ಪ ಮಜಾಕ್ಕೆ ಅಡ್ಡಿ : ಸದ್ಯಕ್ಕೆ ಮಾರಿಷಸ್ ನಲ್ಲಿ ವಿಹರಿಸುತ್ತಿರುವ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಸಂತೋಷವನ್ನೆಲ್ಲ ಈ ಸೋರಿಕೆಯಾಗಿರುವ ವರದಿ ಬಸಿದುಹಾಕಿದೆ. ರಜಾ ಮಜಾ ಮುಗಿಸೇ ಬರುತ್ತಾರಾ, ಅರ್ಧಕ್ಕೆ ತಿರುಗಿಬರುತ್ತಾರಾ ತಿಳಿದುಬಂದಿಲ್ಲ. ಆರಂಭದಿಂದಲೂ ಸಂಪೂರ್ಣ ಅಧಿಕಾರ ನೀಡದೆ ಲೋಕಾಯುಕ್ತರೊಡನೆ ಮುಸುಕಿನ ಗುದ್ದಾಟ ನಡೆಸಿದ್ದ ಯಡಿಯೂರಪ್ಪಗೆ ಈ ವರದಿ ಭಾರೀ ಆಘಾತ ನೀಡಿರುವುದಂತೂ ಸ್ಪಷ್ಟ.
ಅಂದಾಜಿನ ಪ್ರಕಾರ, ಸರಕಾರಕ್ಕೆ 14 ತಿಂಗಳು ನಡೆದಿರುವ ಗಣಿಗಾರಿಕೆಯಿಂದ 1827 ಕೋಟಿ ರು. ನಷ್ಟವಾಗಿದೆ. ಎಲ್ಲಾ ಪಕ್ಷಗಳ ನಾಯಕರು ಮಾತ್ರವಲ್ಲ 600 ಅಧಿಕಾರಿಗಳು ಭಾಗಿಯಾಗಿರುವುದು ವರದಿಯಲ್ಲಿ ಬಹಿರಂಗವಾಗಿದೆ. ನೇರವಾಗಿ ಅಥವಾ ಬೇನಾಮಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಎಲ್ಲಾ ರಾಜಕಾರಣಿಗಳ ಮತ್ತು ಅಧಿಕಾರಿಗಳ ಹೆಸರು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.
ನಾಳೆ, ಜು. 21ರಂದು ವರದಿ ಸಲ್ಲಿಕೆ? : ಈಗ ತಾನೆ ಬಂದಿರುವ ಸುದ್ದಿಯ ಪ್ರಕಾರ, ಜುಲೈ 21ರಂದೇ ನ್ಯಾ. ಸಂತೋಷ್ ಹೆಗಡೆಯವರು ಅಕ್ರಮ ಗಣಿಗಾರಿಕೆ ವರದಿಯನ್ನು ಸರಕಾರಕ್ಕೆ ಒಪ್ಪಿಸಲಿದ್ದಾರೆ.
ಪ್ರತಿಕ್ರಿಯೆ : ವರದಿ ಸೋರಿಕೆಗೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ವರದಿಯಲ್ಲಿ ತಮ್ಮ ಹೆಸರು ಇದ್ದದ್ದು ನಿಜವೇ ಆದಲ್ಲಿ, ಪಲಾಯನವನ್ನಂತೂ ಮಾಡುವುದಿಲ್ಲ. ಮುಂದಿನ ಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ, ಬಿಕೆ ಹರಿಪ್ರಸಾದ್ ಅವರು, ವರದಿ ಸೋರಿಕೆಯಾಗಿದ್ದು ನಿಜಕ್ಕೂ ದುರದೃಷ್ಟಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿ ಸೋಮಣ್ಣ, ಅಕ್ರಮ ಗಣಿಗಾರಿಕೆಗೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎಂದು ಹೇಳಿದ್ದಾರೆ. ಶ್ರೀರಾಮುಲು ಅವರು, ಹೆಗಡೆಯವರ ಮೇಲೆ ಮತ್ತು ಕಾನೂನಿನ ಮೇಲೆ ತಮಗೆ ನಂಬಿಕೆಯಿದೆ ಎಂದು ಹೇಳಿದ್ದಾರೆ. [ಅಕ್ರಮ ಗಣಿಗಾರಿಕೆ ಸ್ಫೋಟ : ಕ್ಷಣಕ್ಷಣದ ಸುದ್ದಿ]