ಧೋನಿ- ಹರ್ಭಜನ್ ಮಧ್ಯೆ ಬೆಂಕಿಗೆ ಎಣ್ಣೆ ಸುರಿದ ಮಲ್ಯ
ಬೆಂಗಳೂರು ಜು 18: ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಹಾಗೂ ಹರ್ಭಜನ್ ಮೈದಾನದ ಹೊರಗೆ ಕಾನೂನು ಸಮರದಲ್ಲಿ ಭಾಗಿಯಾಗುತ್ತಿದ್ದಾರೆ.
ಧೋನಿ ಅಭಿನಯಿಸಿರುವ ವಿಜಯ್ ಮಲ್ಯರ ಯುಬಿ ಸಮೂಹದ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಹರ್ಭಜನ್ ಸಿಂಗ್ ವಕೀಲರಾದ ದೆವಾನಿ ಅಡ್ವೋಕೇಟ್ಸ್ ಹಾಗೂ ಕನ್ಸಲೆಂಟ್ಸ್ ನೋಟಿಸ್ ಜಾರಿ ಮಾಡಿದ್ದಾರೆ.
ಮೆಕ್ ಡೊವೆಲ್ಸ್ ನಂ.1 ಪ್ಲಾಟಿನಮ್ ಜಾಹೀರಾತಿನಲ್ಲಿ ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸಿಖ್ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಹರ್ಭಜನ್ ಸಿಂಗ್ ದೂರಿದ್ದಾರೆ.
ರಿಕಾರ್ಡ್ಸ್ ನ ರಾಯಲ್ ಸ್ಟ್ಯಾಗ್ ವಿಸ್ಕಿ ಹಾಗೂ ಮೆಕ್ ಡೊವೆಲ್ ಎರಡು ಪ್ರತಿಸ್ಪರ್ಧಿ ಪಾನೀಯಗಳಾಗಿದ್ದು, ರಾಯಲ್ ಸ್ಟ್ಯಾಗ್ ನ ರಾಯಭಾರಿಯಾಗಿ ಹರ್ಭಜನ್ ಕಾಣಿಸಿಕೊಂಡಿದ್ದಾರೆ. ಧೋನಿ ಮೆಕ್ ಡೊವೆಲ್ ಆಡ್ ನಲ್ಲಿ ಹರ್ಭಜನ್ ಅವರನ್ನು ಅಪಮಾನಗೊಳಿಸುವಂತೆ ಚಿತ್ರಿಸಲಾಗಿದೆ.
ಈ ರೀತಿ ಜಾಹೀರಾತಿನಿಂದ ನನ್ನ ಕುಟುಂಬದ ಮರ್ಯಾದೆ ಹಾಳುಗುತ್ತದೆ ಅಲ್ಲದೆ , ನನ್ನ ಹಾಗೂ ಧೋನಿ ನಡುವೆ ಅನಗತ್ಯ ಸಂಘರ್ಷಕ್ಕೆ ನಾಂದಿ ಹಾಡುತ್ತದೆ. ಇದರಿಂದ ದೇಶಕ್ಕೆ ಎಷ್ಟು ನಷ್ಟ ಎಂಬುದನ್ನು ಮನಗಾಣಿರಿ ಎಂದು ಹರ್ಭಜನ್ ತಾಯಿ ಅವ್ತಾರ್ ಕೌರ್ ಹೇಳಿದ್ದಾರೆ.
ನೋಟಿಸ್ ಪಡೆದ ಮೂರು ದಿನದೊಳಗೆ ಕ್ಷಮಾಪಣೆ ಎಲ್ಲಾ ಪ್ರಮುಖ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಪ್ರಕಟವಾಗಬೇಕು. ಹರ್ಭಜನ್ ಕುಟುಂಬಕ್ಕೆ ಪರಿಹಾರ ಧನ ರೂಪದಲ್ಲಿ 1 ಲಕ್ಷ ರೂ ನೀಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹರ್ಭಜನ್ ಪರ ವಕೀಲ ಶ್ಯಾಮ್ ದೆವಾನಿ ಹೇಳಿದ್ದಾರೆ.