ಅಶೋಕ್, ಸೋಮಣ್ಣ ತಂತ್ರಕ್ಕೆ ಮಣಿದ ಕುಮಾರಸ್ವಾಮಿ !
ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವ ವಿಷಯದಲ್ಲಿ ಸ್ವಲ್ಪ ಯಾಮಾರಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂರ್ನಾಲ್ಕು ದಿನಗಳ ಕಾಲ ಸತ್ಯಾಗ್ರಹ ಮುಂದುವರಿದ ನಂತರ, ಬೇಕಾದರೆ ಮಾತುಕತೆಯ ಪ್ರಯತ್ನ ನಡೆಸಿದರಾಯಿತು ಎಂಬ ಇರಾದೆ ಹೊಂದಿದ್ದರು.
ಆದರೆ, ಕುಮಾರಸ್ವಾಮಿ ಅವರನ್ನು ವೈದ್ಯರು ಹಲವು ಬಾರಿ ತಪಾಸಣೆ ಮಾಡುತ್ತಿರುವುದು ಸರ್ಕಾರಕ್ಕೆ ಅದರಲ್ಲೂ ಗೃಹ ಸಚಿವ ಆರ್.ಅಶೋಕ್, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೊದಲಾದ ಕೆಲವರಿಗೆ ಸಣ್ಣದಾಗಿ ಆತಂಕ ಶುರುವಾಯಿತು. 'ಸುಮ್ಮನೆ ಒಂದು ಪತ್ರ ಬರೆದುಕೊಡಿ. ಅದನ್ನು ಹಿಡಿದುಕೊಂಡು ನಾವು ಮಾತನಾಡುತ್ತೇವೆ' ಎಂದು ಸಚಿವರಾದ ಅಶೋಕ್ ಮತ್ತು ಸೋಮಣ್ಣ ಅವರು ಯಡಿಯೂರಪ್ಪಗೆ ದುಂಬಾಲು ಬಿದ್ದರು.
ಇದಕ್ಕೆ ಒಪ್ಪಿದ ಯಡಿಯೂರಪ್ಪ ಅವರು ಪತ್ರ ಬರೆದು ಕೊಟ್ಟರು. ಅದನ್ನು ತಗೆದುಕೊಂಡು ಹೋದ ಸಚಿವರು ಕುಮಾರಸ್ವಾಮಿ ಜತೆ ಮಾತುಕತೆ ಮಾಡುವ ಮೂಲಕ ಮನವೊಲಿಸುವಲ್ಲಿ ಯಶಸ್ವಿಯಾದರು.
ಇವರಿಬ್ಬರಿಗೇಕೆ ಊಸಾಬರಿ?: ಅಶೋಕ್ ಗೃಹ ಸಚಿವರು. ಕುಮಾರಸ್ವಾಮಿ ಅವರ ಆರೋಗ್ಯಕ್ಕೆ ತೊಂದರೆಯಾಗಿ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಪರಿಸ್ಥಿತಿ ನಿರ್ಮಾಣವಾದರೆ ಅದು ಸಹಜವಾಗಿಯೇ ತಮ್ಮ ತಲೆಗೆ ಬರುತ್ತದೆ. ಮೇಲಾಗಿ ಅಶೋಕ್ ಕೂಡ ಒಕ್ಕಲಿಗ ಸಮುದಾಯದ ನಾಯಕ. ದೇವೇಗೌಡರ ಕುಟುಂಬಕ್ಕೂ ಆಪ್ತರೇ. ಈ ವಿಷಯದಲ್ಲಿ ತಮ್ಮ ಸಮುದಾಯ ತಮ್ಮ ವಿರುದ್ಧ ತಿರುಗಿ ಬಿದ್ದರೆ ಎಂಬ ಚಿಂತೆಯೂ ಅವರನ್ನು ಕಾಡಿತ್ತು.
ಇನ್ನು, ಸೋಮಣ್ಣ ಅವರು ದೇವೇಗೌಡರ ಕುಟುಂಬಕ್ಕೆ ಅಷ್ಟೇನೂ ದೂರದವರಲ್ಲ. ಮೊನ್ನೆಯಷ್ಟೇ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ದೇವೇಗೌಡರ ಮುಖಾಮುಖಿ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ಸೋಮಣ್ಣ. ಗೌಡರ ತವರಾದ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದರಿಂದ ಈ ವಿಷಯದಲ್ಲಿ ಗೌಡರ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದೇ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದರು.