ಬಿಹಾರದಲ್ಲಿ 17 ವರ್ಷದಿಂದ ಕೃಷ್ಣನ ಜನ್ಮಸ್ಥಾನದಲ್ಲಿ ಹನುಮ!

ಕಾನೂನು ತೊಡಕಿನಿಂದಾಗಿ ಕೃಷ್ಣಗಢ ಪೊಲೀಸ್ ಠಾಣೆಯಲ್ಲಿ ಅನೇಕ ವರ್ಷಗಳಿಂದ ಹನುಮಂತನ ವಿಗ್ರಹ ಸೊರಗುತ್ತಾ ಇದೆ. ಸಂತ ರಾಮಾನುಜ ಸ್ವಾಮಿ ವಿಗ್ರಹ ರೂಪದಲ್ಲಿ ಈ ಹನುಮಂತನಿಗೆ ಸಾಥ್ ನೀಡಿದ್ದಾನೆ.
ಹೋಗಲಿ ಹನುಮ, ಠಾಣೆಯಲ್ಲಾದರೂ ಪೂಜೆ ಪುನಸ್ಕಾರಗಳೊಂದಿಗೆ ಕ್ಷೇಮವಾಗಿದ್ದಾನಾ ಅಂದರೆ ಮತ್ತೆ ಹನುಮನಾಣೆಗೂ ಅಂಥ ಸೀನು ಇಲ್ಲಿಲ್ಲ. ಠಾಣೆಯಲ್ಲಿ ವಿಗ್ರಹಗಳೆರಡೂ ತೀರಾ ನಿರ್ಲಕ್ಷಿತ ಸ್ಥಿತಿಯಲ್ಲಿದ್ದು, ಹನುಮನ ವಿಗ್ರಹದ ಬಾಲ ಭಿನ್ನವಾಗಿದೆ. ರಾಮಾನುಜರ ವಿಗ್ರಹದ ಕಾಲು ಮುರಿದಿದೆ. ಆದರೆ ವಿಗ್ರಹಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲೇ ವಿಗ್ರಹಗಳು ಭಿನ್ನವಾಗಿದ್ದವು ಎನ್ನುತ್ತಿದ್ದಾರೆ ಪೊಲೀಸರು.
ಭೋಜ್ಪುರ ಜಿಲ್ಲೆಯ ಗುಂಡಿ ಗ್ರಾಮದಲ್ಲಿ ಶ್ರೀರಂಗಜೀ ದೇವಾಲಯದಿಂದ 1994ರಲ್ಲಿ ಈ ಎರಡೂ ವಿಗ್ರಹಗಳು ಕಳವಾಗಿದ್ದವು. ಕಳವಾದ ವಿಗ್ರಹಗಳನ್ನು ಪೊಲೀಸರು ಗುಂಡಿ ಗ್ರಾಮದಿಂದಲೇ ವಶಪಡಿಸಿಕೊಂಡಿದ್ದರೂ ಈವರೆಗೂ ಈ ವಿಗ್ರಹಗಳನ್ನು ದೇವಾಲಯದಲ್ಲಿ ಮರು ಸ್ಥಾಪಿಸಲಾಗಿಲ್ಲ. ಈ ಎರಡೂ ವಿಗ್ರಹಗಳಿಗೆ ಮುಕ್ತಿ ಕಾಣಿಸಬೇಕೆಂದರೆ 42 ಲಕ್ಷ ರೂಪಾಯಿ ಮೊತ್ತದ ಜಾಮೀನು ನೀಡಬೇಕು ಎನ್ನುತ್ತಿದೆ ಸ್ಥಳೀಯ ನ್ಯಾಯಾಲಯ. ಈ ನ್ಯಾಯ ಆ ಹನುಮನಿಗೇ ಪ್ರೀತಿ!
ಇಷ್ಟೋಂದು ದೊಡ್ಡ ಮೊತ್ತ ಎಲ್ಲಿಂದ ತರೋದು. ಅದಕ್ಕೇ ವಿಗ್ರಹವನ್ನು ತೆಗೆದುಕೊಂಡು ಹೋಗಲು ಯಾವೊಬ್ಬ ಗ್ರಾಮಸ್ಥರೂ ಮುಂದೆ ಬಂದಿಲ್ಲ ಎಂದು ದೇವಾಲಯದ ಮ್ಯಾನೇಜರ್ ಯುಗಳ ಕಿಶೋರ್ ಸಿಂಗ್ ಹೇಳಿದ್ದಾರೆ.












Click it and Unblock the Notifications