ಬಿದ್ದ ಕೋಟೆ ಬಾಗಿಲು ಕಟ್ಟುವುದು ಯಾರ ಹೊಣೆ?

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ನೇತೃತ್ವದ ತಂಡ ಕೋಟೆಯ ಧ್ವಂಸಗೊಂಡಿರುವ ಹೆಬ್ಬಾಗಿಲ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಗುರುವಾರ ಮಾತನಾಡಿದರು.
ಶತಮಾನಗಳಷ್ಟು ಇತಿಹಾಸ ಹೊಂದಿರುವ ಬಳ್ಳಾರಿ ಕೋಟೆ ಮತ್ತು ಅದರ ಹೆಬ್ಬಾಗಿಲು ಮಳೆಯಿಂದಾಗಿ ಬಿದ್ದಿಲ್ಲ. ಕೆಲ ದುಷ್ಕರ್ಮಿಗಳು ಈ ಬಾಗಿಲನ್ನು ಉದ್ದೇಶಪೂರ್ವಕವಾಗಿಯೇ ಬೀಳಿಸಿದ್ದಾರೆ. ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಅವರ ಮನೆಗೆ ಸುಲಭವಾಗಿ - ಸರಾಗವಾಗಿ ಸಾಗಲಿಕ್ಕಾಗಿ ಈ ಕೋಟೆ ಬಾಗಿಲನ್ನು ಧ್ವಂಸಗೊಳಿಸಲಾಗಿದೆ ಎಂದು ದೂರಿದರು. [ನೆಲಸಮವಾದ ಕೋಟೆಯ ಚಿತ್ರಪಟ]
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಅರಾಜಕತೆ ನಿರ್ಮಾಣವಾಗಿದೆ. ನಗರದ ಹೃದಯಭಾಗದಲ್ಲಿಯ ಗಡಿಗೆ ಚೆನ್ನಪ್ಪ ವೃತ್ತವನ್ನು ಧ್ವಂಸ ಮಾಡಲಾಯಿತು. ಈ ಟವರ್ ಅನ್ನು ಪುನರ್ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು.
ಆದರೆ, ಕಾಮಗಾರಿ ಈವರೆಗೆ ಪ್ರಾರಂಭವಾಗಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ವಿರುದ್ಧ ಸದನದಲ್ಲಿ ಪ್ರಿವಿಲೇಜ್ಡ್ ಮೋಷನ್ ಮೂವ್ ಮಾಡಲಾಗುತ್ತದೆ. ಈಗ ಕೋಟೆ ಬಾಗಿಲನ್ನು ಉದ್ಧೇಶಪೂರ್ವಕವಾಗಿಯೇ ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಪರಿಸ್ಥಿತಿ ಹೀಗೇ ಬಿಟ್ಟಲ್ಲಿ ಮತ್ತಿನ್ಯಾವ ಕಟ್ಟಡಗಳು ಧ್ವಂಸಗೊಳ್ಳಲಿವೆಯೋ? ಎಂದು ಆತಂಕ ವ್ಯಕ್ತಪಡಿಸಿದರು.
ನೀರಿನ ಮೂಲ ತಿಳಿಸಿ : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ 2 ಬೃಹತ್ ಕೈಗಾರಿಕೆಗಳು ಪ್ರಾರಂಭಕ್ಕಾಗಿ ಕೃಷಿಯೋಗ್ಯ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ಪಡೆಯುತ್ತಿದೆ. ಇದರ ವಿರುದ್ಧ ತೋಂಟದಾರ್ಯ ಶ್ರೀಗಳು ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ. ಈ ಕೈಗಾರಿಕೆಗಳಿಗೆ ನೀರಿನ ಮೂಲ ಯಾವುದು? ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದರು.












Click it and Unblock the Notifications