ಸದ್ಯಕ್ಕೆ ಅನಂತ ಭದ್ರತೆ ನಮ್ಮದು; ಮುಂದಿನದು ಕೋರ್ಟಿಗೆ
ಇದರೊಂದಿಗೆ ಅನಂತ ನಿಧಿ ರಕ್ಷೆ ಬಗ್ಗೆ ಎದ್ದಿದ್ದ ಚಿಂತೆ, ಚಿಂತನೆ ಸದ್ಯಕ್ಕೆ ಒಂದು ಸ್ಪಷ್ಟ ರೂಪ ಪಡೆದಂತಾಗಿದೆ. ಸೇನೆಗೆ ವಹಿಸುವ ಊಹಾಪೋಹಗಳನ್ನೂ ಅವರು ಅಲ್ಲಗಳೆದಿದ್ದಾರೆ.
ದೇವಸ್ಥಾನಕ್ಕೆ ಬಿಗಿ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಭಾನುವಾರ ಚರ್ಚೆ ನಡೆಸಿದ ಚಾಂಡಿ, ಸದ್ಯಕ್ಕೆ ಈ ಅಪಾರ ನಿಧಿಯೂ ದೇವಸ್ಥಾನದ ಅಧೀನದಲ್ಲಿಯೇ ಇರುತ್ತದೆ. ಮುಟ್ಟುಗೋಲು ಹಾಕಿಕೊಳ್ಳುವ ಇರಾದೆ ಸರಕಾರಕ್ಕೆ ಇಲ್ಲ. ಆ ಬಗ್ಗೆಯೂ ಸುಪ್ರೀಂಕೋರ್ಟ್ ನಿರ್ದೇಶನವನ್ನು ಚಾಚೂ ತಪ್ಪದೆ ಪಾಲಿಸಲಾಗುವುದು ಎಂದು ಅವರು ಒತ್ತಿ ಹೇಳಿದ್ದಾರೆ.
ದೇವಸ್ಥಾನದ ಸಮೀಪವಿರುವ ಫೋರ್ಟ್ ಪೊಲೀಸ್ ಠಾಣೆಯಿಂದಲೇ ಸದ್ಯಕ್ಕೆ ವಿಶೇಷ ಪೊಲೀಸ್ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ದಿನಂಪೂರ್ತಿ ರಾಜ್ಯ ಪೊಲೀಸ್ ರಕ್ಷಣೆ ತಕ್ಷಣಕ್ಕೆ ನೀಡಲಾಗಿದೆ. ಸೋಮವಾರ ಪರಿಸ್ಥಿತಿಯನ್ನು ಅವಲೋಕಿಸಿ, ಮುಂದಿನ ಪೊಲೀಸ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು
ಗೃಹ ಕಾರ್ಯದರ್ಶಿ ಕೆ. ಜಯಕುಮಾರ್ ಅವರ ಮೂಲಕ ಸರಕಾರದ ನಿಲುವನ್ನು ಸುಪ್ರೀಂಕೋರ್ಟ್ ಗೆ ಗಮನಕ್ಕೆ ತರಲಾಗುವುದು. ಜಯಕುಮಾರ್ ಅವರು ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯ ಸದಸ್ಯರ ಪೈಕಿ ಒಬ್ಬರು.