ಬಿಎಸ್ ವೈ ಸಿಸ್ಟರ್ ಕನ್ಸರ್ನ್: ನೆಂಟರಿಗೆ ಮೈಸೂರಲ್ಲಿ ಸೈಟು
ಮೈಸೂರಿನಲ್ಲಿ ಮುಡಾ ನಿರ್ಮಿಸಿರುವ ವಿಜಯನಗರ ಮೂರನೇ ಹಂತದ ಸುಸಜ್ಜಿತ ಬಡಾವಣೆಯಲ್ಲಿ 10 ನಿವೇಶನಗಳನ್ನೂ ಮುಖ್ಯಮಂತ್ರಿಯವರ ಸಂಬಂಧಿಕರಿಗೆ ನೀಡಲಾಗಿದೆ. 2009 ಮತ್ತು 2010ರ ಅವಧಿಯಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂಬ ಅಂಶ ದಾಖಲೆಗಳಲ್ಲಿ ಇದೆ.
ಯಡಿಯೂರಪ್ಪ ಅವರ ಸಂಬಂಧಿಕರಾದ ಬಿ.ಎಂ.ಜಗದಾಂಬ, ಬಿ.ಎಂ. ನಂದಿಬಸಪ್ಪ, ಬಿ.ಆರ್. ಸರ್ವಮಂಗಳಾ, ನಾಗಮ್ಮ, ಎಸ್.ಸಿ. ರಾಜೇಶ್, ಗೌರಮ್ಮ, ಗೋಪಾಲಕೃಷ್ಣ, ಗುರುಮೂರ್ತಿ, ಪಿ.ಎನ್. ಪ್ರಕಾಶ್ ಮತ್ತು ಜಿ. ಚಂದ್ರಕಲಾ ಅವರಿಗೆ ವಿವಿಧ ಅಳತೆಯ ನಿವೇಶನಗಳನ್ನು ಮುಖ್ಯಮಂತ್ರಿಯವರ ವಿವೇಚನಾ ಕೋಟಾದ ಅಡಿ ಮಂಜೂರು ಮಾಡಲಾಗಿದೆ. ಗೌರಮ್ಮ ಅವರು ಯಡಿಯೂರಪ್ಪ ಅವರ ಸಹೋದರಿ, ರಾಜೇಶ್ ಮುಖ್ಯಮಂತ್ರಿಯವರ ಸಹೋದರಿಯ ಪುತ್ರ, ಉಳಿದವರು ಅವರ ಸಂಬಂಧಿಕರು ಎಂದು ಜೆಡಿಎಸ್ ತಿಳಿಸಿದೆ.
ಗಮಾರ್ಹವೆಂದರೆ, ಯಡಿಯೂರಪ್ಪ ಅವರು ತಮ್ಮ ಸಂಬಂಧಿಕರಿಗೆ ಹತ್ತು ನಿವೇಶನಗಳನ್ನು 'ಜಿ' ಕೋಟಾದ ಅಡಿ ಮಂಜೂರು ಮಾಡಿದ್ದಾರೆ ಎಂದಷ್ಟೇ ಪಕ್ಷ ಹೇಳಿದೆ. ಆದರೆ, ಇಲ್ಲಿ ಕಾನೂನು ಅಥವಾ ನಿಯಮಗಳ ಉಲ್ಲಂಘನೆ ಆಗಿರುವ ಬಗ್ಗೆ ಯಾವುದೇ ವಿಷಯವನ್ನೂ ಪ್ರಸ್ತಾಪಿಸಿಲ್ಲ.
ಜಗದಾಂಬ, ರಾಜೇಶ್, ಪ್ರಕಾಶ್ ಮತ್ತು ಚಂದ್ರಕಲಾ ಅವರಿಗೆ 50x80 ಅಡಿ ವಿಸ್ತೀರ್ಣದ ನಿವೇಶನ ನೀಡಲಾಗಿದೆ. ಸರ್ವಮಂಗಳಾ, ನಾಗಮ್ಮ, ಗೌರಮ್ಮ, ಗೋಪಾಲಕೃಷ್ಣ, ಗುರುಮೂರ್ತಿ ಅವರಿಗೆ 40x60 ಅಡಿ ಮತ್ತು ನಂದಿಬಸಪ್ಪ ಅವರಿಗೆ 30x40 ಅಡಿ ವಿಸ್ತೀರ್ಣದ ನಿವೇಶನ ನೀಡಲಾಗಿದೆ. ಫಲಾನುಭವಿಗಳು ಮೈಸೂರು, ಮಂಡ್ಯ ಜಿಲ್ಲೆಯ ಬೂಕನಕೆರೆ, ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ, ಬೆಂಗಳೂರು ಮತ್ತಿತರ ವಿಳಾಸ ನೀಡಿ ನಿವೇಶನ ಪಡೆದಿದ್ದಾರೆ.
ಸೈಟು ಹಂಚಿಕೆ ನಿಜ: 'ಮೂಡಾ ಸೈಟು ಪಡೆದ 10 ಮಂದಿ ಪೈಕಿ ನಾಲ್ವರು ನನ್ನ ಬಂಧುಗಳು. ತಂಗಿ ಮತ್ತು ಮಕ್ಕಳಿಗೆ ಸೈಟು ಹಂಚಿರುವುದು ನಿಜ' ಎಂದು ಸಿ ಎಂ ಯಡಿಯೂರಪ್ಪ ಅವರು ಸೋಮವಾರ ಬೆಳಗ್ಗೆ ಸಮರ್ಥಿಸಿಕೊಂಡಿದ್ದಾರೆ.