ತಿರುವನಂತಪುರ ದೇವಸ್ಥಾನದಲ್ಲಿ 700 ಕೋ ಆಭರಣ ಪತ್ತೆ

ಅನೇಕ ಸ್ವರ್ಣಾಭರಣಗಳು, ಪಾತ್ರೆ ಪಗಡಿಗಳು, ಮುತ್ತು ರತ್ನಗಳು, ಅಮೂಲ್ಯ ಹರಳುಗಳನ್ನು ಈ ಕೊಠಡಿಯಲ್ಲಿ ಭದ್ರವಾಗಿಡಲಾಗಿತ್ತು. ಅಪಾರ ಪ್ರಮಾಣದ ಚಿನ್ನದ ಸರಗಳು ಹಾಗೂ ಇತರ ಒಡವೆಗಳು, ಅನೇಕ ಬೆಳ್ಳಿ ಮತ್ತು ತಾಮ್ರದ ಒಪ್ಪದ ವಸ್ತುಗಳು, ರತ್ನಖಚಿತ ಕಿರೀಟ, ಹೊಳೆಯುತ್ತಿರುವ ಸ್ವರ್ಣಲೇಪಿತ ದೇವರ ಛತ್ರದ ಸಹಿತ ಭಾರೀ ಬೆಲೆ ಹಾಗೂ ಪ್ರಾಚ್ಯವಸ್ತು ಮೌಲ್ಯವುಳ್ಳ ದೇವರ ವಸ್ತುಗಳು ಈ ಮೂರು ಕೋಣೆಯಲ್ಲಿದ್ದವು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
18ನೇ ಶತಮಾನದಲ್ಲಿ ತಿರುವಾಂಕೂರು ಪ್ರಾಂತ್ಯದ ರಾಜ ಮಾರ್ತಾಂಡ ವರ್ಮ ನಿರ್ಮಿಸಿರುವ ಈ ಭವ್ಯ ದೇವಸ್ಥಾನದ ಆಡಳಿತವನ್ನು ರಾಜಮನೆತನದ ನಿಯಂತ್ರಣದಲ್ಲಿರುವ ಟ್ರಸ್ಟ್ ನೋಡಿಕೊಳ್ಳುತ್ತಿದೆ. ನೂರಾರು ವರ್ಷಗಳಿಂದ ದೇವಸ್ಥಾನದ ರಹಸ್ಯ ಕೊಠಡಿಗಳಲ್ಲಿ ಭದ್ರವಾಗಿದ್ದ ಅಮೂಲ್ಯ ವಸ್ತುಗಳ ತಪಶೀಲು ಪಟ್ಟಿ ತಯಾರಿಸಲು ಸುಪ್ರೀಂಕೋರ್ಟ್ ಇತ್ತೀಚೆಗೆ ಕೇರಳ ಹೈಕೋರ್ಟಿನ ಇಬ್ಬರು ವಿಶ್ರಾಂತ ನ್ಯಾಯಾಧೀಶರನ್ನೊಳಗೊಂಡಿರುವ ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಅನೇಕ ದಶಕಗಳಿಂದಲೂ ಈ ನೆಲಮಾಳಿಗೆಗಳಿಗೆ ಬೀಗ ಮುದ್ರೆ ಬಿದ್ದಿತ್ತು.
ಅತ್ಯಪೂರ್ವವಾದ ವಾಸ್ತುಶೈಲಿ ಮತ್ತು ಅಮೃತಶಿಲೆಯ ಕಂಬಗಳಿಂದಾಗಿ ಜಗತ್ ಪ್ರಸಿದ್ಧ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಸಾವಿರ ಹೆಡೆಯ ಅನಂತನ (ಹಾವು) ಮೇಲೆ ಪವಡಿಸಿರುವ ವಿಷ್ಣು ಆರಾಧ್ಯ ದೇವರು. ತಿರುವಾಂಕೂರು ರಾಜಮನೆತನ ರಚಿಸಿದ ಟ್ರಸ್ಟ್ ದೇವಸ್ಥಾನದ ಆಡಳಿತವನ್ನು ನೋಡಿಕೊಳ್ಳುತ್ತಿದೆ. ತಿರುವಾಂಕೂರು ರಾಜಮನೆತನಕ್ಕೆ ಅನಂತ ಪದ್ಮನಾಭನೇ ಮನೆ ದೇವರು. ದೇವಸ್ಥಾನದ ಆಡಳಿತದಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳಲು ರಹಸ್ಯ ಕೊಠಡಿಗಳಲ್ಲಿರುವ ಸಂಪತ್ತಿನ ಯಾದಿ ತಯಾರಿಸುವಂತೆ ಆಗ್ರಹಿಸಿ ಸುಪ್ರೀಂಕೋರ್ಟಿಗೆ ಫಿರ್ಯಾದು ಸಲ್ಲಿಸಲಾಗಿತ್ತು.












Click it and Unblock the Notifications