ಆತ್ಮಹತ್ಯೆ ಅನುಕರಿಸಲು ಹೋದ ವಿದ್ಯಾರ್ಥಿ ಸಾವು

ಎರಡನೇ ತರಗತಿ ವಿದ್ಯಾರ್ಥಿ ಕಾರ್ತಿಕ್ (7) ಮೃತಪಟ್ಟವನು. ಕೌಟುಂಬಿಕ ಕಲಹದಿಂದ ಮನನೊಂದಿದ್ದ ಅದೇ ಶಾಲೆಯ ಅಡುಗೆ ಸಹಾಯಕಿ ಉಷಾ ಅವರು ಮನೆಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶವ ನೋಡಲು ಉಷಾ ಅವರ ಮನೆಗೆ ಹೋಗಿದ್ದರು. ಕಾರ್ತಿಕ್ ಸಹ ಅವರ ಜತೆ ಹೋಗಿ ಶವ ನೋಡಿಕೊಂಡು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ಶಾಲೆಗೆ ಬಂದ ಆತ ಗೆಳೆಯರ ಎದುರು ಬೆಲ್ಟ್ನಿಂದ ಕಿಟಕಿ ಸರಳಿಗೆ ನೇಣು ಹಾಕಿಕೊಳ್ಳುವಂತೆ ಅನುಕರಿಸಿದ. ಸ್ಟೂಲ್ ಮೇಲೆ ನಿಂತಿದ್ದ ಆತ ಕುತ್ತಿಗೆಗೆ ಬೆಲ್ಟ್ ಹಾಕಿಕೊಂಡಾಗ ಸ್ಟೂಲ್ನಿಂದ ಆಕಸ್ಮಿಕವಾಗಿ ಜಾರಿದ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಶಿಕ್ಷಕರಿಗೆ ಈ ಬಗ್ಗೆ ಮಾಹಿತಿ ನೀಡಿದರು. ತಕ್ಷಣ ಬಂದ ಶಿಕ್ಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೋಮಾ ಸ್ಥಿತಿಯಲ್ಲಿದ್ದ ಆತ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ ಎಂದು ಪೊಲೀಸರು ಹೇಳಿದ್ದಾರೆ.
ಕಾರ್ತಿಕ್ ಲಾರಿ ಚಾಲಕ ಸುಬ್ರಹ್ಮಣ್ಯ ಮತ್ತು ಸಿದ್ಧಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುವ ಪರಿಮಳಾ ದಂಪತಿಯ ಏಕೈಕ ಪುತ್ರ. 15 ದಿನಗಳ ಹಿಂದೆಯಷ್ಟೇ ಕಾರ್ತಿಕ್ನ ಚಿಕ್ಕಪ್ಪ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ದೃಶ್ಯವನ್ನೂ ಆತ ನೋಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಗನನ್ನು ಕಳೆದುಕೊಂಡ ದಂಪತಿ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಕಾರ್ತಿಕ್ ನೇಣು ಹಾಕಿಕೊಂಡಿದ್ದ ದೃಶ್ಯವನ್ನು ನೋಡಿದ ಶಾಲೆಯ ಶಿಕ್ಷಕಿ ಲಕ್ಷ್ಮಿದೇವಮ್ಮ (48) ಅವರಿಗೆ ಹೃದಯಾಘಾತವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಮಂಜುನಾಥ್ ಮತ್ತು ಎಸ್ಐ ರಂಗಸ್ವಾಮಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.












Click it and Unblock the Notifications