ಮಣಿಪಾಲದಿಂದ ಬಜಪೆಗೆ ವೋಲ್ವೋ ಬೇಡವೇ ಬೇಡ
ಬಡ ಮತ್ತು ಮಧಮ ವರ್ಗದ ಜನರ ಹೊಟ್ಟೆಗೆ ಹೊಡೆಯಲು, ವೋಲ್ವೋ ಬಸ್ ಪ್ರಾರಂಭಿಸುವ ಚಿಂತನೆಯನ್ನು ಶ್ರೀಮಂತರು ಹಾಗೂ ಶ್ರೀಮಂತ ಸಂಸ್ಥೆಗಳ ಪರವಾಗಿರುವ ರಾಜಕಾರಣಿಗಳು ಯೋಚಿಸಿದ್ದಾರೆ. ಈ ಯೋಜನೆ ಕಾರ್ಯಗತಗೊಂಡರೆ 400ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಟ್ಯಾಕ್ಸಿ ಚಾಲಕರು ತಿಳಿಸಿದ್ದಾರೆ.
ಮಣಿಪಾಲಕ್ಕೆ ತುಂಬಾ ಮಂದಿ ಪ್ರವಾಸಿಗರು ಬರುತ್ತಿದ್ದು, ಇವರ ಬಾಡಿಗೆಯನ್ನು ನಂಬಿಕೊಂಡೇ ಟ್ಯಾಕ್ಸಿ ಚಾಲಕರು ಹಾಗೂ ಇವರುಗಳ ಕುಟುಂಬಗಳು ತಮ್ಮ ಬದುಕನ್ನು ಕಟ್ಟಿ ಕೊಂಡಿದ್ದಾರೆ. ಬದುಕಿನ ಮತ್ತು ಆದಾಯದ ಮೂಲಕ್ಕೆ ಪೆಟ್ಟು ಬಿದ್ದರೆ, ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇಲ್ಲಿನ ಟ್ಯಾಕ್ಸಿ ಮಾಲಕರಿಗಾಗಲೀ, ಚಾಲಕರಿಗಾಗಲೀ ಇಲ್ಲ. ವಿದೇಶಿ ಮತ್ತು ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಹಾಗೂ ಪ್ರವಾಸಿಗರನ್ನು ನಂಬಿಕೊಂಡೇ ಲಕ್ಷಗಳ ಲೆಕ್ಕದಲ್ಲಿ ಬ್ಯಾಂಕ್ಗಳಿಂದ ಸಾಲ ಪಡೆದು ಟ್ಯಾಕ್ಸಿ ಇಟ್ಟುಕೊಂಡು ಬಾಡಿಗೆಯಿಂದ ಜೀವನ ಸಾಗಿಸುತ್ತಿರುವ ಜನರು, ವೋಲ್ವೋ ಬಸ್ ಆರಂಭ ಗೊಂಡದ್ದೇ ಆದರೆ ನಿರ್ಗತಿಕರಾಗಲಿದ್ದಾರೆ ಎಂದು ಟ್ಯಾಕ್ಸಿ ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ.
ಸರಕಾರ ಖಂಡಿತವಾಗಿಯೂ ವೋಲ್ವೋ ಬಸ್ ಸಂಚಾರವನ್ನು ಆರಂಭಿಸಲಿದೆ ಎಂಬ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯರ ಹೇಳಿಕೆಗೆ ಟ್ಯಾಕ್ಸಿ ಚಾಲಕರು ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧವಾಗಿ ಟ್ಯಾಕ್ಸಿಮೆನ್ಸ್ ಅಸೋಸಿಯೇಶನ್ನ ಅಧ್ಯಕ್ಷ ಶಾಸಕ ಕೆ. ರಘುಪತಿ ಭಟ್ ಅವರು ಕೂಡಾ ಸುಮ್ಮನಿರುವುದು ಆತಂಕದ ವಿಷಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ವಿರುದ್ದ ಹೋರಾಟ ಹಮ್ಮಿಕೊಳ್ಳಲು ಇದೀಗ ಟ್ಯಾಕ್ಸಿ ಚಾಲಕರು ನಿರ್ಧರಿಸಿದ್ದಾರೆ.