ಹುಣಸೂರು ಜೋಡಿ ಹತ್ಯೆ- ಕಿಲ್ಲರ್ ಕೆಎಫ್ ಡಿ ನಿಷೇಧ ಸಾಧ್ಯತೆ

ಕೆಎಫ್ ಡಿ ಸಂಘಟನೆಗೆ ಸಂಪನ್ಮೂಲ ಕ್ರೋಡೀಕರಿಸುವ ಏಕೈಕ ಉದ್ದೇಶದಿಂದ ಅಮಾಯಕ ವಿದ್ಯಾರ್ಥಿಗಳನ್ನು ಅಪಹರಿಸಿ, ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಆರೋಪಿಗಳು ವಿದ್ಯಾರ್ಥಿ ಸುಧೀಂದ್ರನನ್ನು ಅಪಹರಿಸಿ ಅವರ ತಂದೆ ಹುಣಸೂರಿನ ಹಾರ್ಡ್ವೇರ್ ವ್ಯಾಪಾರಿ ಮೋಹನ್ಕುಮಾರ್ ಅವರಿಂದ ಐದು ಕೋಟಿ ಹಣ ವಸೂಲಿ ಮಾಡಿ, ಅದರಲ್ಲಿ ಅರ್ಧ ಹಣವನ್ನು ಎಲ್ಲರೂ ಹಂಚಿಕೊಂಡು, (5 ಕೋಟಿ ರು ಒತ್ತೆ ಹಣದಲ್ಲಿ) ಉಳಿದ ಹಣವನ್ನು ಸಂಘಟನೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ್ದರು.
ಕೆಎಫ್ ಡಿ ಬಗ್ಗೆ ಮೊದಲಿನಿಂದಲೂ ಹಲವಾರು ದೂರುಗಳು ಇದ್ದವು. ಈಗ ಹುಣುಸೂರು ಪ್ರಕರಣಲ್ಲಿ ಭಾಗಿಯಾಗಿರುವುದು ನಿಚ್ಚಳವಾಗಿದೆ. ಆ ಸಂಘಟನೆ ಅಪರಾಧ ಕೃತ್ಯಗಳಲ್ಲಿ ತೊಡಗಿರುವುದು ಬಹಿರಂಗಗೊಂಡಿರುವುದರಿಂದ ತತ್ಕ್ಷಣ ಸಂಘಟನೆಯನ್ನು ನಿಷೇಧಿಸಬಹುದು ಎಂದು ಗೃಹ ಇಲಾಖೆಯೂ ವರದಿ ನೀಡಿದ್ದು, ಈ ಬಗ್ಗೆ ಶೀಘ್ರ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.
ಮೈಸೂರಿನಲ್ಲಿ ಕಳೆದ ವರ್ಷ ಆಗಸ್ಟ್ 15ರಂದು ಈ ಸಂಘಟನೆ ಪರ್ಯಾಯವಾಗಿ ಧ್ವಜಾರೋಹಣಕ್ಕೆ ಮುಂದಾಗಿತ್ತು. ಬಂಧಿತರ ಪೈಕಿ ಒಬ್ಬ ಗುಲ್ಬರ್ಗ ಜೈಲು ಸೇರಿದ್ದ. ಸಂಘಟನೆ ಕೇರಳ, ತಮಿಳುನಾಡು, ಆಂಧ್ರ ಮತ್ತು ಕರ್ನಾಟಕದಲ್ಲಿ ಚಟುವಟಿಕೆ ನಡೆಸುತ್ತಿದೆ. ಗೃಹ ಸಚಿವ ಆರ್. ಅಶೋಕ್ ಅವರನ್ನು ಕೆಎಫ್ ಡಿ ನಿಷೇಧ ಕುರಿತು ಕೇಳಲಾದ ಪ್ರಶ್ನೆಗೆ, ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.











Click it and Unblock the Notifications