ಕುಮಾರಸ್ವಾಮಿ ಮೇಲೆ ಯಡಿಯೂರಪ್ಪ ನಾಡಬಾಂಬ್ ಎಸೆತ

ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮಕ್ಕಳು ಮಂಗಳೂರು ಬಂದರಿನಿಂದ 1 ಲಕ್ಷ ಕೋಟಿ ರು. ಮೊತ್ತದ ಕಬ್ಬಿಣದ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರು. ಅದರ ಫ್ರೂಫು ತನ್ನ ಬಳಿಯಿದ್ದು ಸಕಾಲದಲ್ಲಿ ಎಲ್ಲ ದಾಖಲೆಗಳನ್ನು ಬಯಲು ಮಾಡುವುದಾಗಿ ಹೇಳಿದ್ದಾರೆ.
ವಸತಿ ಸಮುಚ್ಚಯದ ಗುದ್ದಲಿ ಪೂಜೆಗೆಂದು ಇಲ್ಲಿಗೆ ಬಂದಿದ್ದ ಯಡಿಯೂರಪ್ಪ, ದೇವೇಗೌಡ ಮತ್ತು ಅವರ ಕುಟುಂಬವನ್ನು ಗುರಿಯನ್ನಾಗಿ ಮಾಡಿಕೊಂಡು ಮಾತಿನ ಈಟಿಗಳನ್ನು ಎಸೆದರು. ಅಕ್ರಮ ರಫ್ತನ್ನು ಮುಂದಿಟ್ಟುಕೊಂಡು ಧರಂ ಸಿಂಗ್ ಅವರನ್ನು ಗೌಡರ ಕುಟುಂಬ ಸಾಕಷ್ಟು ಬ್ಲಾಕ್ ಮೇಲ್ ಮಾಡಿ ಗೋಳು ಹುಯ್ದುಕೊಂಡಿದೆ ಎಂದು ಆರೋಪಿಸಿದರು.
ಗೌಡರು ತನ್ನೊಬ್ಬನನ್ನು ಮಾತ್ರವಲ್ಲ ಹಿಂದಿನ ಮುಖ್ಯಮಂತ್ರಿಗಳನ್ನು ಕೂಡ ನೆಮ್ಮದಿಯಿಂದ ಕೆಲಸ ಮಾಡಲು ಬಿಟ್ಟಿಲ್ಲ. ಬೊಮ್ಮಾಯಿ, ಜೆಎಚ್ ಪಟೇಲ್, ಧರಂ ಸಿಂಗ್, ಎಸ್ಎಮ್ ಕೃಷ್ಣರಿಗೆ ದೇವೇಗೌಡರು ಅಡ್ಡಗಾಲು ಹಾಕಿದ್ದಾರೆ. ಕೆಲ ನಿರ್ಲಜ್ಜ ಅಧಿಕಾರಿಗಳು ಗೌಡರ ಮನೆಗೆ ಕಡತಗಳನ್ನು ಒಯ್ದು ಕೊಡುತ್ತಿದ್ದರು ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಜೆಡಿಎಸ್ ರಾಜ್ಯಕ್ಕೆ ಅಂಟಿದ ಒಂದು ಶಾಪ. ಬರೀ ಬೆಂಕಿ ಹಚ್ಚುವುದೇ ಈ ಕುಟುಂಬದ ಕೆಲಸ. ಅದನ್ನು ರಾಜ್ಯದಿಂದ ಹೊರಗಟ್ಟದೆ ನಮಗೂ, ಜನರಿಗೂ ನೆಮ್ಮದಿಯಿಲ್ಲ ಎಂದು ಮುಖ್ಯಮಂತ್ರಿಗಳು ಬೆಂಕಿ ಕಾರಿದರು. ಈ ಎಲ್ಲ ಆರೋಪಗಳಿಗೆ ದೇವೇಗೌಡ ಮತ್ತು ಕುಮಾರಸ್ವಾಮಿ ಅಂಡ್ ಬ್ರದರ್ಸ್ ಏನು ಉತ್ತರ ಹೇಳುತ್ತಾರೆ?












Click it and Unblock the Notifications