ಹಿರಿಯೂರಿನ ದಲಿತರ ಕೇರಿಯಲ್ಲಿ ಪೇಜಾವರ ಶ್ರೀ ನಡಿಗೆ

ಹಿಂದುಗಳೆಲ್ಲರೂ ಸಮಾನರು. ನಾವೆಲ್ಲಾ ಯಾವುದೇ ಭೇದ ಭಾವವಿಲ್ಲದೇ ಬದುಕಬೇಕೆಂಬ ಉದ್ದೇಶದಿಂದ ಮಾಧ್ವಾ ಮಠದ ಶ್ರೀಗಳಾದ ನಾನು ಹಾಗೂ ಆದಿ ಜಾಂಬವ ಮಠದ ಮಾದಿಗ ಸ್ವಾಮಿಜಿಗಳು ಸೇರಿಕೊಂಡು ದಲಿತ ಕೇರಿಗಳಲ್ಲಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದರು.
ಎಲ್ಲರೂ ಸಮಾನರು: ಹಿಂದು ಧರ್ಮದಲ್ಲಿ ಮೇಲು ಕೀಳುಗಳಿಲ್ಲ ಇಲ್ಲಿ ಎಲ್ಲರೂ ಸಮಾನರು. ಈ ಧರ್ಮ ಒಂದು ರೀತಿಯಲ್ಲಿ ಗಂಗೆಯಂತೆ. ಆದರೆ ಅನೇಕ ಮಲಿನಗಳು ಬಂದು ಸೇರಿಕೊಂಡು ಗಂಗೆಯನ್ನು ಮಲಿನ ಮಾಡುತ್ತಿದೆ. ಆದರೆ ಈ ಮಲಿನತೆ ಹಿಂದು ಧರ್ಮದಲ್ಲಿ ಹೆಚ್ಚು ಕಾಲ ಉಳಿಯಬಾರದು ಎನ್ನುವ ಉದ್ದೇಶದಿಂದ ಇದನ್ನು ಸ್ವಚ್ಛ ಮಾಡುವ ಕಾರ್ಯಕ್ಕೆ ನಾವು ಕೈ ಹಾಕಿದ್ದೇವೆ.
ಹಿಂದು ಧರ್ಮದಲ್ಲಿ ಅಸ್ಪ್ರಶ್ಯತೆಯಿದ್ದರೆ ಅದು ಕಳಂಕ. ಆ ಕಳಂಕದಿಂದ ಕೆಟ್ಟ ಹೆಸರು ಬರುವುದು ನಮಗೆ ಅಂದರೆ ಮಠಾಧೀಶರಿಗೆ. ಈ ನಾಡಿನಲ್ಲಿ ಇಷ್ಟೆಲ್ಲಾ ಮಠಗಳು ಇದ್ದರೂ ಕೂಡಾ ಜಾತೀಯತೆ ಇನ್ನು ಜೀವಂತವಾಗಿದೆಯೆಂದರೆ ಅದು ಈ ಎಲ್ಲಾ ಮಠಗಳಿಗೆ ಅವಮಾನ ಎಂದುಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.
ಹಿಂದುಳಿದವರ ಉನ್ನತಿ ಮುಖ್ಯ: ಹಿಂದು ಧರ್ಮದ ಉನ್ನತಿಯಾಗಬೇಕೆಂದರೆ ಹಿಂದುಳಿದವರ ಉನ್ನತಿಯಾಗಬೇಕು.ಅದಕ್ಕೆ ಬೇಕಾದೆಲ್ಲಾ ಕಾರ್ಯಗಳನ್ನು ಪೂರಕವಾಗಿ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣಕೊಡಬೇಕು. ಎಲ್ಲರೂ ದುಡಿಯಬೇಕು.ದುಂದುವೆಚ್ಚ ಮಾಡಬಾರದು. ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಶ್ರೀಗಳು ಕಿವಿ ಮಾತು ಹೇಳಿದರು.
ದಲಿತರಿಗೆ ಶಿಕ್ಷಣಕೊಡುವ ನಿಟ್ಟಿನಲ್ಲಿ ಉಡುಪಿಯಲ್ಲಿ ಊಟ ವಸತಿ ಸಹಿತ ಶಾಲೆಯನ್ನು ತೆರೆದಿದ್ದೇವೆ. ಮುಂದೆ ಮೈಸೂರಿನಲ್ಲಿ ತೆರೆಯಲಿದ್ದೇವೆ. ಆದ್ದರಿಂದ ತಾವುಗಳೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು.
ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಜೊತೆಗಿದ್ದ ಆದಿಜಾಂಬವ ಮಠದ ಶ್ರೀಗಳಾದ ಷಡಾಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ದೂರ ಉಡುಪಿಯಿಂದ ಪೇಜಾವರ ಶ್ರೀಗಳು ಚಿತ್ರದುರ್ಗಕ್ಕೆ ಬಂದು ಇಲ್ಲಿನ ಹಳ್ಳಿಗಳಲ್ಲಿ ಬಂದು ಪಾದಯಾತ್ರೆ ಮಾಡುವುದರಿಂದ ಅವರಲ್ಲಿರುವ ದಲಿತಪರ ಕಾಳಜಿ ಗೊತ್ತಾಗುತ್ತಿದೆ ಎಂದರು.
ದಲಿತರು, ಸವರ್ಣಯರು ಸೇರಿದಂತೆ ಉಳಿದ ನಾವೆಲ್ಲರೂ ಸಮಾನತೆಯಿಂದ ಬದುಕಬೇಕು. ನಾವೆಲ್ಲಾ ಜಾಗೃತರಾಗಬೇಕು ಎಂದು ಕರೆಕೊಟ್ಟರು. ಶ್ರೀಗಳುಮಾಡುವ ಈ ಕಾರ್ಯಕ್ಕೆ ಅನೇಕರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಅವರಿಗೆ ಈ ಸಮಾಜದ ಮೇಲಿರುವ ಕಾಳಜಿಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾರ ಮಾತಿಗೂ ಕಿವಿಗೊಡದೇ ನಾವು ಒಂದಾಗಿ ಬಾಳಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಾಗವಹಿಸಿದ್ದ ಧರ್ಮ ಜಾಗರಣದ ಮುನಿಯಪ್ಪ ಮಾತನಾಡಿ ನಾವು ಹೆತ್ತ ತಾಯಿ ತಂದೆಯ ಜೊತೆಗೆಸಾಯುವ ತನಕ ಬಾಳಬೇಕು. ಬದಲಾಗಿ ಬೇರೆ ಕಡೆಗಳಲ್ಲಿ ಹೋಗುವ ಕೆಟ್ಟ ಚಾಳಿಯನ್ನು ಬೆಳೆಸಿಕೊಳ್ಳಬಾರದು. ಹಾಗೆಯೇ ನಾವು ಹುಟ್ಟಿದ ಹಿಂದು ಧರ್ಮವನ್ನು ಬಿಟ್ಟು ಬೇರೆ ಯಾವ ಧರ್ಮಗಳಿಗೂ ಮತಾಂತರವಾಗಬಾರದು. ಹಾಗೆಆದರೆಅದು ನಾವು ಹುಟ್ಟಿದಧರ್ಮಕ್ಕೆ ಮಾಡಿದ ಅಪಮಾನವಾಗುತ್ತದೆ. ಹೆತ್ತ ತಾಯಿಗೆಮಾಡಿದ ದ್ರೋಹವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀನಿವಾಸ್, ರಮೇಶ್, ಜಯ್ಯಣ್ಣ, ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.











Click it and Unblock the Notifications