ಅಮರನಾಥ ಯಾತ್ರೆ ವಿವಾದ: ಪೂಜೆ ಸಂಪ್ರದಾಯಕ್ಕೆ ಭಂಗ
ಹಿಮಾಲಯದ ದುರ್ಗಮ ಗುಹೆಯಲ್ಲಿ ಜೂನ್ ವೇಳೆಗೆ ಉದ್ಭವವಾಗುವ ನೈಸರ್ಗಿಕ ಹಿಮಲಿಂಗಕ್ಕೆ ಭಕ್ತರು ಪೂಜೆ ಸಲ್ಲಿಸುವುದು ಪರಂಪರಾಗತ. ಆದರೆ ಈ ಬಾರಿ ಜೂನ್ 29ರಿಂದ ಯಾತ್ರೆ ಆರಂಭಿಸಿ ಎಂದು ಶ್ರೀ ಅಮರನಾಥ ಯಾತ್ರಾ ಮಂಡಳಿಯು ಭಕ್ತರಿಗೆ ಸೂಚಿಸಿತ್ತು. ಆದರೆ ಭಕ್ತರು ಜೂನ್ 15ರಿಂದಲೇ ಯಾತ್ರೆ ಆರಂಭಿಸುತ್ತೇವೆಂದು ಪಟ್ಟು ಹಿಡಿದಿದ್ದರು. ಅದರಂತೆ 4 ಮಂದಿ ಹೆಲಿಕಾಪ್ಟರ್ ನಲ್ಲಿ ಹೋಗಿ ಹಿಮಲಿಂಗಕ್ಕೆ ಪೂಜೆ ಸಲ್ಲಿಸುವ ಒಪ್ಪಂದಕ್ಕೆ ಬರಲಾಗಿತ್ತು.
ಆದರೆ ಬುಧವಾರ ಈ ಒಪ್ಪಂದ ಕೈಗೂಡಲಿಲ್ಲ. ಮೂಲ ಸ್ಥಳದಿಂದ 6 ಕಿ.ಮೀ. ದೂರವಿರುವ ಅನಂತನಾಗ ಜಿಲ್ಲೆಯ ಪಂಜ್ತರಣಿ ಎಂಬಲ್ಲಿ ಭಕ್ತರು ಪೂಜೆ ಸಲ್ಲಿಸಿದರು. ಹಿಂದು ಪುರಾಣದ ಪ್ರಕಾರ ಅಮರನಾಥದ ಗುಹೆಯಲ್ಲಿ ಕುಳಿತು ಈಶ್ವರನು ಪಾರ್ವತಿಗೆ ಅಮರತ್ವವನ್ನು ಬೋಧಿಸಿದ ಎನ್ನಲಾಗುತ್ತದೆ. ಪ್ರತಿವರ್ಷ ಇಲ್ಲಿಗೆ ಸಾವಿರಾರು ಭಕ್ತರು ಜಾರುವ ಹಿಮದ ಮಧ್ಯೆ ಕಾಲ್ನಡಿಗೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. 2005ರಿಂದ ಪ್ರತಿವರ್ಷ 2 ತಿಂಗಳ ಕಾಲ ಪೂಜೆಗೆ ಅವಕಾಶ ನೀಡುತ್ತಿದ್ದ ಸರ್ಕಾರ ಈ ಬಾರಿ ಅದನ್ನು 46 ದಿನಗಳಿಗೆ ಇಳಿಸಿದೆ.