ಸ್ವಾಮೀಜಿ ಪರಿವಾರಕ್ಕೆ ಕರ್ನಾಟಕದ ಭ್ರಷ್ಟಾಚಾರ ಕಾಣ್ತಿಲ್ಲವೇ?
ಪಕ್ಷದ ವಕ್ತಾರ ವೈ.ಎಸ್.ವಿ. ದತ್ತ ಅವರು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡುತ್ತಾ ಈ ಪ್ರಶ್ನೆ ಎತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭ್ರಷ್ಟಾಚಾರದ ವಿರುದ್ಧ ದಾಖಲೆ, ಸಾಕ್ಷ್ಯಾಧಾರಗಳು ಸಾಕಷ್ಟು ಬಹಿರಂಗವಾಗಿವೆ. ಬಿಜೆಪಿ ರಾಷ್ಟ್ರೀಯ ನಾಯಕರ ಕಣ್ಣಿಗೆ ಬೀಳುತ್ತಿಲ್ಲ ಅಷ್ಟೆ. ಆದರೆ ಪೇಜಾವರ ಸ್ವಾಮೀಜಿ, ಸಂಘ ಪರಿವಾರದ ಮುಖಂಡರ ಕಣ್ಣಿಗಾದರೂ ಬೀಳಬೇಕಲ್ಲವೇ ಎಂದು ಕೇಳಿದರು.
ರಾಮದೇವ್ ಅವರ ಜತೆಗೆ ಪೇಜಾವರ ಸ್ವಾಮೀಜಿ ಅವರು ಸಹ ಒಂದು ದಿನದ ಉಪವಾಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಮದೇವ್ ಜತೆಗಿನ ಹೋರಾಟಕ್ಕೂ ಮುನ್ನ ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಸ್ವಾಮೀಜೀಗಳು ಹೋರಾಟ ಮಾಡಲಿ ಎಂದರು.
ಆರ್ಎಸ್ಎಸ್, ಎಬಿವಿಪಿ ಮತ್ತು ಪೇಜಾವರ ಸ್ವಾಮೀಜಿ ಅವರು ಕರ್ನಾಟಕದ ಬಿಜೆಪಿ ಸರ್ಕಾರದಲ್ಲಿ ನೈತಿಕತೆ ಇದೆ ಎಂಬ ಭಾವನೆಯನ್ನೇನಾದರೂ ಹೊಂದಿದ್ದಾರೆಯೇ ಎಂಬುದನ್ನಾದರೂ ಸ್ಪಷ್ಟಪಡಿಸಲಿ ಎಂದು ತಾಕೀತು ಮಾಡಿದರು.
ಯಡಿಯೂರಪ್ಪ ಪದೇ ಪದೇ ಹೇಳುತ್ತಿರುವ ಮಾತೆಂದರೆ ನನ್ನ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ ಎಂಬುದಾಗಿದೆ. ಅವರೇನು ರಾಜ್ಯದ ಜನತೆ ದಡ್ಡರೆಂದು ತಿಳಿದಿರುವಂತಿದೆ. ಅವರ ಅಳಿಯ ಮತ್ತು ಮಕ್ಕಳು ನ್ಯಾಯಾಲಯದಲ್ಲಿ ವಿಚಾರಣೆಗಳಿಗೆ ತಂದಿರುವ ಎಲ್ಲಾ ತಡೆಯಾಜ್ಞೆಗಳನ್ನು ರದ್ದು ಪಡಿಸಲಿ, ಆಗ ಆರೋಪಗಳು ಸಾಬೀತಾಗುತ್ತವೆ ಎಂದು ದತ್ತ ಸವಾಲು ಹಾಕಿದರು.