ನಿರ್ದಯಿ ಅಮ್ಮ, ನತದೃಷ್ಟ ಮಕ್ಕಳು ಮತ್ತು ಕಾರ್ಮಿಕ

ಗೋಡೆ ಕುಸಿದು ಸಾವು : ಕತ್ರಿಗುಪ್ಪೆ ಬಳಿ ರಿಂಗ್ ರಸ್ತೆಯಲ್ಲಿರುವ ಜನತಾ ಬಜಾರ್ ಹತ್ತಿರ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಗೋಡೆ ಕುಸಿದು ಕಾರ್ಮಿಕ ಗಣೇಶ್ (24) ಮೃತಪಟ್ಟಿದ್ದಾನೆ. ಅವಶೇಷಗಳಡಿ ಸಿಲುಕಿದ ಮೂವರನ್ನು ಪಾರು ಮಾಡಲಾಗಿದೆ. ಘಟನೆ ಇಂದು ಬೆಳಿಗ್ಗೆ 10 ಗಂಟೆಗೆ ಸಂಭವಿಸಿದೆ. ಅಗ್ನಿಶಾಮಕ ದಳದವರು ಕೂಡಲೆ ಸ್ಥಳಕ್ಕೆ ಧಾವಿಸಿದರಾದರೂ ಗಣೇಶ್ ನನ್ನು ಬದುಕಿಸಲು ಸಾಧ್ಯವಾಗಲಿಲ್ಲ.
ನಿರ್ದಯಿ ಅಮ್ಮ ನತದೃಷ್ಟ ಮಕ್ಕಳು : ಗಂಡ ಮತ್ತು ಹೆಂಡತಿಯ ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಇಬ್ಬರ ಹೆಣ ಉರುಳುವಲ್ಲಿ ಪರ್ಯವಸಾನವಾಗಿದೆ. ಗಂಡ ಚುಚ್ಚು ಮಾತು ಆಡಿದ್ದಾನೆ ಎಂಬ ಕಾರಣಕ್ಕೆ ಕೆಂಪಮ್ಮ (44) ಎಂಬುವವರು ಹಾಲಿನಲ್ಲಿ ವಿಷ ಸೇರಿಸಿ ತಾವೂ ಕುಡಿದು, ತಮ್ಮಿಬ್ಬರು ಹೆಣ್ಣುಮಕ್ಕಳಿಗೆ ನೀಡಿದ್ದಾರೆ. ಕೆಂಪಮ್ಮ ಮತ್ತು ಮಗಳು ಹೇಮಲತಾ (12) ಸಾವಿಗೀಡಾಗಿದ್ದರೆ, ಬೃಂದಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಕೆರೆಗೆ ಹಾರವಾದ ವಿದ್ಯಾರ್ಥಿಗಳು : ಸರ್ಜಾಪುರ ರಸ್ತೆಯಲ್ಲಿರುವ ದೊಮ್ಮಸಂದ್ರದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಇಂದು ಬೆಳಿಗ್ಗೆ ಜರುಗಿದೆ. ಸುಷ್ಮಾ (11) ಎಂಬ ವಿದ್ಯಾರ್ಥಿನಿಯ ಶವ ಪತ್ತೆಯಾಗಿದ್ದು, ಇನ್ನೊಬ್ಬ ವಿದ್ಯಾರ್ಥಿಯ ಹುಡುಕಾಟದಲ್ಲಿ ಅಗ್ನಿಶಾಮಕ ದಳದವರು ನಿರತರಾಗಿದ್ದಾರೆ.












Click it and Unblock the Notifications