ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳೆವು : ಕುಮಾರಸ್ವಾಮಿ
ಸಭೆಯ ನಂತರ ವಿವರ ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು, ವಿಧಾನಮಂಡಲದ ಎರಡು ಸದನಗಳಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಸುಪ್ರೀಂ ಕೋರ್ಟ್, ಸ್ಪೀಕರ್ ವಿರುದ್ಧ ತೀರ್ಪು ನೀಡಿರುವುದು ದೇಶದಲ್ಲಿಯೇ ಇದೇ ಪ್ರಥಮವಾಗಿದೆ. ಮುಖ್ಯಮಂತ್ರಿ ಅವರು ಸ್ಪೀಕರ್ ಅವರನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ತೀರ್ಪಿನಲ್ಲಿ ಹೇಳಲಾಗಿದೆ. ಆದ್ದರಿಂದ ಇಂತಹ ಸ್ಪೀಕರ್ ನಡೆಸುವ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.
ಅಧಿವೇಶನ ವಿವರ: ಜೂನ್ 2ರಿಂದ 15ರವರೆಗೆ ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ನಡೆಯಲಿದೆ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದ್ದಾರೆ.
2011-12ನೇ ಆರ್ಥಿಕ ವರ್ಷದ ಪೂರ್ಣ ಬಜೆಟ್ಗೆ ಒಪ್ಪಿಗೆ ಪಡೆಯುವುದು ಈ ಅಧಿವೇಶನದ ಪ್ರಮುಖ ಉದ್ದೇಶ. ಜೂ. 2ರಿಂದ ಹತ್ತು ಕೆಲಸದ ದಿನಗಳ ಕಾಲ ಅಧಿವೇಶನ ನಡೆಸಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಅದರಂತೆ ಜೂ.15ರವರೆಗೂ ಅಧಿವೇಶನ ನಡೆಯಲಿದೆ ಎಂದರು.
ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ಮೊದಲ ಎರಡು ದಿನಗಳ ಕಾಲ ಪರಿಷತ್ನಲ್ಲಿ ಪ್ರಶ್ನೋತ್ತರ ಕಲಾಪ ಇರುವುದಿಲ್ಲ. ನಂತರದ ದಿನಗಳಲ್ಲಿ ಪ್ರಶ್ನೋತ್ತರ ನಡೆಯುತ್ತದೆ. ಈಗಾಗಲೇ ಸದಸ್ಯರು 350 ಪ್ರಶ್ನೆಗಳನ್ನು ನೀಡಿದ್ದು, ಈ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದರು.