ಆಸರೆ ಮನೆ ಹಸ್ತಾಂತರಕ್ಕೆ ಯಾದಗಿರಿಗೆ ಬಾರದ ಸಿಎಂ

ಇದೇ ಸಂದರ್ಭದಲ್ಲಿ ಸುರಪುರ ಶಾಸಕ ರಾಜೂಗೌಡ, ರಾಯಚೂರು ಲೋಕಸಭೆ ಸದಸ್ಯರು ಸಣ್ಣ ಫಕೀರಪ್ಪ, ಯಾದಗಿರಿ ಜಿಲ್ಲಾಧಿಕಾರಿ ಗುರುನೀತ್ ತೇಜ್ ಮೇನೆನ್, ಹಾಗೂ ತಿಂಥಣಿ ಗ್ರಾಮದ ಸಾವಿರಾರು ಜನರು ಈ ಆಸರೆ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುರಪುರ ತಾಲೂಕಿನ ತಿಂಥಣಿಯಲ್ಲಿ 120, ಬಂಡೊಳ್ಳಿ ಗ್ರಾಮದಲ್ಲಿ 50 ಹಾಗೂ ಶಹಾಪುರ ತಾಲೂಕಿನ ಗೌಡೂರು ಗ್ರಾಮದಲ್ಲಿ 50 ಮನೆಗಳ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಯಾದಗಿರಿಯಲ್ಲಿ ಉಸ್ತುವಾರಿ ಸಚಿವರೇ ಹಸ್ತಾಂತರಿಸಿದ್ದಾರೆ. ಇದಕ್ಕೆ ಜಿಲ್ಲೆಯ ಜನರಿಂದ ಅಸಮಾಧಾನ ವ್ಯಕ್ತವಾಗಿದೆ.
ಬಾರದ ಸಿಎಂ: ಇಡೀ ರಾಜ್ಯಕ್ಕೆ ಒಂದು ರೀತಿಯ ಸಂಪ್ರದಾಯವಾದರೆ, ಯಾದಗಿರಿ ಜಿಲ್ಲೆಗೆ ಪ್ರತ್ಯೇಕ ಸಂಪ್ರದಾಯ. ಉತ್ತರ ಕರ್ನಾಟಕದ ಎಲ್ಲೆಡೆ ನೆರೆ ಸಂತ್ರಸ್ತರು ಮುಖ್ಯಮಂತ್ರಿಗಳಿಂದಲೇ ಆಸರೆ ಮನೆಗಳ ಕೀಲಿಕೈ ಪಡೆದರೆ, ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮಾತ್ರ ಈ ಭಾಗ್ಯ ಇಲ್ಲ. ಜಿಲ್ಲೆಯಾಗಿ ಒಂದೂವರೆ ವರ್ಷವಾದರೂ ಸಚಿವ ಸಂಪುಟದ ಸದಸ್ಯರು ಇತ್ತ ತಿರುಗಿ ನೋಡಿಲ್ಲ.
ಸಂತ್ರಸ್ತರ ಗೋಳು: ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಬೀಳಲಾರಂಭಿಸಿದೆ. ಒಟ್ಟು 910 ಆಸರೆ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಕಾಮಗಾರಿ ವಹಿಸಿಕೊಂಡಿರುವ ಸಂಸ್ಥೆಗಳ ವಿಳಂಬದಿಂದಾಗಿ ಈಗಾಗಲೇ ಮನೆಗಳ ನಿರ್ಮಾಣ ಸಾಕಷ್ಟು ತಡವಾಗಿದೆ. ಒಟ್ಟು 910 ಮನೆಗಳಲ್ಲಿ ಕೇವಲ 220 ಮನೆಗಳು ಮಾತ್ರ ಇದೀಗ ಸಿದ್ಧಗೊಂಡಿವೆ. ಇನ್ನುಳಿದವರಿಗೆ ಈ ಮಳೆಗಾಲದಲ್ಲೂ ಸ್ವಂತ ಮನೆ ಕೀಲಿಸಿಗುವ ಸೌಭಾಗ್ಯ ಇಲ್ಲದಂತಾಗಿದೆ.












Click it and Unblock the Notifications