ಆಪರೇಷನ್ ಕಮಲವಲ್ಲ, ಕೊಡಗಿನಲ್ಲಿ ಆಪರೇಷನ್ ಪುಂಡಾನೆ
ಅರವಳಿಕೆ ಪೂರೈಕೆಯಾಗದಿರುವುದರಿಂದ ಪಾಲಿಬೆಟ್ಟ ಕ್ಯಾಂಪ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಮೂರು ದಿನದಿಂದ ಕೆಲಸವಿಲ್ಲದೇ ಕಳೆಯುತ್ತಿದ್ದಾರೆ. ಇದೇ ಕ್ಯಾಂಪ್ ನಲ್ಲಿ, ಕಾರ್ಯಾಚರಣೆಯಲ್ಲಿ ಹಿಡಿದಿರುವ 6 ಪುಂಡಾನೆಗಳನ್ನು ಮರಕ್ಕೆ ಕಟ್ಟಿ ಹಾಕಲಾಗಿದೆ.
ಪುಂಡಾನೆಗಳನ್ನು ಹಿಡಿಯಲು ಕೇಂದ್ರದಿಂದ ಅನುಮತಿ ಪಡೆಯಲಾಗಿದೆ. ಈ ತಂಡದಲ್ಲಿದ್ದವರು ಭಾರಿ ಕಾಟ ಕೊಡುತ್ತಿದ್ದ ಎರಡು ಪುಂಡಾನೆಗಳನ್ನು ಹಿಡಿಯಲು ಕಾತುರದಲ್ಲಿದ್ದಾರೆ. ಇದರಲ್ಲಿ ಒಂದು ಪುಂಡಾನೆಯ ಜಾಡು ಹಿಡಿಯಲಾಗಿದ್ದು ಅರವಳಿಕೆ ಬಂದಾಕ್ಷಣ ಬಂಧಿಸಲಿದ್ದಾರೆ.
ಅರವಳಿಕೆ ಪೂರೈಕೆಯಲ್ಲಿನ ವಿಳಂಬದಿಂದಾಗಿ ಕ್ಯಾಂಪ್ ನಲ್ಲಿರುವ 6 ಆನೆಗಳನ್ನು ಸಾಕಲು ಪ್ರತಿದಿನ ಸಾವಿರಾರು ರುಪಾಯಿಗಳನ್ನು ವ್ಯರ್ಥಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅರವಳಿಕೆ ಯಾವಾಗ ದೊರಕಲಿದೆ ಎಂಬುದರ ಕುರಿತು ಅಲ್ಲಿನ ಅರಣ್ಯಾಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿದಿಲ್ಲ.
ಕೃಷಿಗೆ ಉಪದ್ರವುಂಟುಮಾಡುವ ಪುಂಡಾನೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ಹಮ್ಮಿಕೊಂಡಿದೆ. ಇನ್ನು ಕೆಲವೇ ದಿನದಲ್ಲಿ ಮುಂಗಾರು ಮಳೆ ಆರಂಭವಾಗುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಲಿದೆ.