ಈ ವಿದೇಶಿಯನ್ನು ನೋಡಿಯಾದರೂ ಕನ್ನಡ ಮಾತಾಡಿ
ಇಸ್ರೆಲ್ನ ಗೇಲ್ಬೆನ್ ಹೆರುತ್ ಎಂಬುವವರೇ ಕನ್ನಡದಲ್ಲಿ ಸಂಶೋಧನೆ ನಡೆಸುತ್ತಿರುವ ವಿದೇಶಿ ವಿದ್ಯಾರ್ಥಿಯಾಗಿದ್ದಾರೆ. ಮೈಸೂರಿನ ವಿವಿ ಮೊಹಲ್ಲಾದ ಅಪಾರ್ಟ್ಮೆಂಟ್ವೊಂದರಲ್ಲಿ ಪತ್ನಿ ಇಬ್ಬರು ಮಕ್ಕಳೊಂದಿಗೆ ನೆಲೆಸಿರುವ ಗೇಲ್ಬೆನ್ ಹೆರುತ್ರವರು ಅಮೆರಿಕ ವಿವಿಯಲ್ಲಿ ಸಂಶೋಧನೆ ನಡೆಸುತ್ತಿದ್ದು, ದೆಹಲಿಯ ಅಮೆರಿಕನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ನ ಸಹಕಾರದೊಂದಿಗೆ ಬೇಲ್ ಕನ್ನಡ ಕಲಿಯಲು ಮೈಸೂರಿಗೆ ಬಂದಿದ್ದಾರೆ.
ಇದೀಗ "ವೀರಶೈವ ಸಾಹಿತ್ಯ" ಕುರಿತು ಸಂಶೋಧನೆ ನಡೆಸುತ್ತಿರುವ ಗೇಲ್ಬೆನ್ ಹೆರುತ್ರವರಿಗೆ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ. ಆರ್.ವಿ.ಎಸ್. ಸುಂದರಂ ಕನ್ನಡ ಕಲಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಕುರಿತು ಆಸಕ್ತಿ ವಹಿಸಿರುವ ಗೇಲ್ಬೆನ್ ಹೆರುತ್ರವರು ಹಿಬ್ರೋ ವಿವಿಯಲ್ಲಿ ಭಾರತೀಯ ಧರ್ಮಗಳ ಕುರಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಇದನ್ನೂ ಓದಿ : ಮೈಸೂರಿನ ನಂದಿಕ್ಷೇತ್ರದಲ್ಲಿ ಸತಿಪತಿಗಳಾದ ವಿದೇಶಿಗರು
12ನೇ ಶತಮಾನದಲ್ಲಿ ನಡೆದ ವಚನ ಚಳವಳಿ ಕುರಿತು ಹೆಚ್ಚಿನ ಆಸಕ್ತಿ ವಹಿಸಿದ್ದು, ಆ ಕುರಿತಂತೆ ಹೆಚ್ಚಿನ ಅಧ್ಯಯನಕ್ಕಾಗಿ ಇದೀಗ ಮೈಸೂರಿಗೆ ಬಂದಿದ್ದಾರೆ. ಈಗಾಗಲೇ ಹಲವು ಸಂಶೋಧಕರನ್ನು ಭೇಟಿ ಮಾಡಿ ಮಾಹಿತಿ ಕಲೆಹಾಕಿರುವ ಗೇಲ್ಬೆನ್ ಹೆರುತ್ರವರು ಕನ್ನಡದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಕನ್ನಡ ಹಾಡುಗಳು ಇವರ ಮನಸೆಳೆದಿದ್ದು, ಅದರಲ್ಲೂ ಡಾ.ರಾಜ್ಕುಮಾರ್ರವರು ಹಾಡಿರುವ ಹಾಡುಗಳೆಂದರೆ ತುಂಬಾ ಇಷ್ಟವಂತೆ. ಹಾಗಾಗಿ ಆ ಹಾಡುಗಳನ್ನು ಸದಾ ಗುನುಗುತ್ತಲೇ ಸುಶ್ರಾವ್ಯವಾಗಿ ಹಾಡಲು ಕೂಡ ಕಲಿತಿದ್ದಾರೆ.
ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಭಾಷೆ ಗೊತ್ತಿದ್ದರೂ ಕನ್ನಡ ಮಾತನಾಡಲು ಹಿಂದೇಟು ಹಾಕುವವರ ನಡುವೆ ಕನ್ನಡದ ಮಹತ್ವವನ್ನು ಅರಿತ ಗೇಲ್ಬೆನ್ ಹೆರುತ್ರವರು ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡದ ಬಗ್ಗೆ ಸಂಶೋಧನೆ ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ವಿಚಾರವೇ ಆಗಿದೆ.