ಬಾಬ್ರಿ ವಿವಾದ: ಹೈಕೋರ್ಟ್ ತೀರ್ಪು ಚಿತ್ರಾನ್ನ

ಅಸಲಿಗೆ ಮೂರೂ ಮನವಿದಾರರು ಕೇಳದೇ ಇದ್ದರೂ ವಿವಾದಿತ ಜಾಗವನ್ನು ಮೂರು ಭಾಗ ಮಾಡಿ ಹಂಚಿದ್ದ ಹೈಕೋರ್ಟ್ ತೀರ್ಪು ವಿಚಿತ್ರ ಮತ್ತು ಆಶ್ಚರ್ಯ ತರುವಂತಾಗಿದೆ. ಆದ್ದರಿಂದ ಕೆಳ ನ್ಯಾಯಾಲಯದ ಈ ತೀರ್ಪನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಅಫ್ತಾಬ್ ಅಲಂ ಮತ್ತು ನ್ಯಾ.ಆರ್.ಎಂ. ಲೋಧ ಅವರ ನ್ಯಾಯಪೀಠ ಸೋಮವಾರ ತಿಳಿಸಿದೆ.
ಮೂರೂ ಬಾಧ್ಯಸ್ಥರು ಸಲ್ಲಿಸಿದ್ದ ಮನವಿಯನ್ನು ಕೈಗೆತ್ತಿಕೊಂಡ ಪೀಠವು, 1993ರ ಜನವರಿಯಲ್ಲಿ ಮತ್ತು 2002ರ ಮಾರ್ಚ್ ನಲ್ಲಿ ಏಪೆಕ್ಸ್ ಕೋರ್ಟ್ ನೀಡಿರುವ ತೀರ್ಪಿನಂತೆ ಬಾಬರಿ ವಿವಾದ ಯಥಾಸ್ಥಿತಿಯಲ್ಲಿ ಮುಂದುವರಿಯಬೇಕು ಎಂದು ಸ್ಪಷ್ಟಪಡಿಸಿದೆ. ಹೈಕೋರ್ಟ್ ತೀರ್ಪಿಗೆ ಸ್ಟೆ ನೀಡಬೇಕೆಂಬ ವಿಚಾರದಲ್ಲಿ ಸುಪ್ರೀಂ ನ್ಯಾಯಪೀಠದಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲ ಇಲ್ಲ. ಆದರೆ ಅರ್ಜಿದಾರು ಸಲ್ಲಿಸಿರುವ ಮನವಿಯ ವಿಚಾರಣೆ ಮುಂದುವರಿಯಲಿದೆ ಎಂದು ಹೇಳಿದೆ.
ಅಯೋಧ್ಯೆಯಲ್ಲಿನ ತಾತ್ಕಾಲಿಕ ದೇವಸ್ಥಾನದಲ್ಲಿ ಪೂಜೆಗೆ ಅನುವು ಮಾಡಿಕೊಟ್ಟಿದ್ದ 1993ರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ 67.703 ಎಕರೆ ಪ್ರದೇಶದಲ್ಲಿ ಯಾವುದೇ ಪಕ್ಷದವರೂ ಧಾರ್ಮಿಕ ಕಾರ್ಯಕ್ರಮಗಳ್ನು ಆಚರಿಸಬಾರದು. ಜತೆಗೆ, ಈ ವಿವಾದಿತ ಜಾಗವು ಕೇಂದ್ರ ಸರಕಾರದ ಅಧೀನದಲ್ಲಿದೆ.
ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಐತಿಹಾಸಿಕ ತೀರ್ಪು ನೀಡಿತ್ತು.












Click it and Unblock the Notifications