ಹಂಪಿಯಲ್ಲಿ ಕೃಷ್ಣದೇವರಾಯ ಕಾಲದ ನಿಧಿ ಪತ್ತೆ!
ವಿಜಯವಿಠ್ಠಲ ದೇವಸ್ಥಾನದ ಟಿಕೆಟ್ ಕೌಂಟರ್ ಪಕ್ಕದಲ್ಲಿ ಒಂದು ಕುಡಿಯುವ ನೀರಿನ ಟ್ಯಾಂಕ್ ಇದೆ. ಈ ಟ್ಯಾಂಕ್ ಪಕ್ಕದಲ್ಲೇ ಮತ್ತೊಂದು ಟ್ಯಾಂಕ್ ಇರಿಸಲಿಕ್ಕಾಗಿ ಒಂದರಿಂದ ಒಂದೂವರೆ ಅಡಿ ಆಳದ ಕುಣಿಯನ್ನು ತೋಡಿದಾಗ ಈ ತಗಡು ಮತ್ತು ಚಿನ್ನದ ಚೂರುಗಳು ಕುಡಿಕೆಯಲ್ಲಿ ಕಾಣಿಸಿಕೊಂಡಿವೆ.
ಈ ದೇವಸ್ಥಾನದ ಸುತ್ತಲೂ ಇರುವ ಮಂಟಪಗಳು ಭಾಗಶಃ ಶಿಥಿಲಾವಸ್ಥೆಯಲ್ಲಿ ಇದ್ದ ಕಾರಣ ಅವುಗಳ ನವೀಕರಣ ಕಾರ್ಯ ಭರದಿಂದ ಸಾಗಿತ್ತು. ಅಲ್ಲದೇ, ಸಮೀಪದ ವಿಷ್ಣು ಮಂಟಪ (ವಿಷ್ಣು ದೇವಸ್ಥಾನ)ದ ನವೀಕರಣ ಕಾರ್ಯ ಇತ್ತೀಚೆಗೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ 100-150 ಮೀಟರ್ ವ್ಯಾಪ್ತಿಯಲ್ಲಿ ಇರುವ ಸಾಲುಮಂಟಪಗಳ ಆಸುಪಾಸಿನಲ್ಲಿ ನವೀಕರಣ ಕಾರ್ಯ ಕೂಡ ನಡೆದಿದೆ.
ಈ ಸಂದರ್ಭದಲ್ಲಿ ಸುತ್ತಲಿನ ಮಣ್ಣಿನ ಪ್ರಮಾಣ ಕಡಿಮೆಯಾಗಿ ರಸ್ತೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಭೂಮಟ್ಟವನ್ನು ಸಮತಟ್ಟುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಈ ಚಿನ್ನದ ತಗಡು ಮತ್ತು ಚೂರುಗಳು ಕಾಣಿಸಿಕೊಂಡಿದೆ. ಐತಿಹಾಸಿಕ ಮಹತ್ವವಿರುವ ಈ ವಸ್ತುಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ಹೆಚ್ಚಿನ ಉತ್ಖನನ ನಡೆಯಲಿದೆ ಎಂದು ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.