ನಾಲ್ಕನೇ ಬಾರಿ ಜವರಾಯ ಆಕೆಯ ಕೈಬಿಡಲಿಲ್ಲ!
ಜೀವನದಲ್ಲಿ ಕಂಡ ಏರಿಳಿತಗಳಿಂದ ಬೇಸತ್ತು ಏರ್ ಪೋರ್ಟ್ ರಸ್ತೆಯಲ್ಲಿರುವ ತನ್ನ ಮನೆಯಲ್ಲಿ ಚೈತ್ರಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಕಿರಣ್ ಕುಮಾರ್ ಎಂಬುವವರನ್ನು ಹತ್ತು ವರ್ಷಗಳ ಕೆಳಗೆ ಪ್ರೇಮ ವಿವಾಹವಾಗಿದ್ದಳು. ಹಳೆಯ ಪ್ರೇಮಿಗಳು ಅವಳನ್ನು ಕೈಬಿಟ್ಟಿದ್ದರೂ, ಪ್ರೇಮದ ಕಹಿಬಿಟ್ಟುಹೋದ ಹಳೆಯ ನೆನಪುಗಳು ಅವಳನ್ನು ಬಿಟ್ಟಿರಲಿಲ್ಲ. ಇದರಿಂದ ಜೀವಿಸುವ ಆಶೆಯನ್ನೇ ಕಳೆದುಕೊಂಡು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಚೈತ್ರಾ.
ನಗರದಲ್ಲಿ ಬಿಪಿಓ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚೈತ್ರಾ ಓದುತ್ತಿರುವಾಗಲೇ ಇಬ್ಬರೊಂದಿಗೆ ವಿಭಿನ್ನ ಕಾಲಘಟ್ಟದಲ್ಲಿ ಪ್ರೇಮದ ಬಲೆಯಲ್ಲಿ ಸಿಲುಕಿದ್ದಳು. ನಂತರ ಬೆಂಗಳೂರಿನಲ್ಲಿ 2005ರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ಕೂಡ ಒಬ್ಬರನ್ನು ಪ್ರೇಮಿಸಿದ್ದಳು. ಮೂವರ ಜೊತೆಯೂ ಪ್ರೇಮ ಫಲಿಸಲಿಲ್ಲ. ಇದರಿಂದ ಆಕೆ ಸಹಜವಾಗಿ ನೊಂದಿದ್ದಳು. ನಂತರ ಕಿರಣ್ ರನ್ನು ಪ್ರೇಮಿಸಿ 2010ರ ಏಪ್ರಿಲ್ 18ರಂದು ಮದುವೆಯಾಗಿದ್ದಳು.
ಇದೇ ವರ್ಷ ಮದುವೆಯ ವಾರ್ಷಿಕೋತ್ಸವದ ಹಿಂದಿನ ದಿನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಳು. ಹಿಂದೆ ಕೂಡ ನರ ಕತ್ತರಿಸಿ ಜೀವ ಕಳೆದುಕೊಳ್ಳಲು ಯತ್ನಿಸಿದ್ದಳು. ಮೂರು ಸಲವೂ ಅದೃಷ್ಟ ಆಕೆಯಪರವಿತ್ತು. ಆದರೆ, ನಾಲ್ಕನೇ ಬಾರಿ ದುರಾದೃಷ್ಟ ಆಕೆಯ ಪರ ವಹಿಸಲಿಲ್ಲ. ಏರ್ ಪೋರ್ಟ್ ರಸ್ತೆ ಪೊಲೀಸರು ದೂರು ದಾಖಲಿಸಿಕೊಂಡು ಅಸಹಜ ಸಾವಿನ ಕೇಸು ದಾಖಲಿಸಿದ್ದಾರೆ.