ಮುಚ್ಚುವ ಭೀತಿಯಲ್ಲಿ ರಾಜ್ಯದ ಮೂರು ಮೃಗಾಲಯ
ಸರಕಾರ ಹಣಕಾಸು ಒತ್ತಾಸೆ ನೀಡದಿದ್ದಲ್ಲಿ ಬೆಳಗಾಂ, ಗುಲ್ಬರ್ಗಾ ಮತ್ತು ದಾವಣಗೆರೆಯ ಮೂರು ಮೃಗಾಲಯಗಳನ್ನು ಮುಚ್ಚುವುದಾಗಿ ಇತ್ತೀಚೆಗೆ ಝಡ್ಎಕೆ ನಿಯೋಗ ತಿಳಿಸಿತ್ತು. ಈ ಮೂರು ಮೃಗಾಲಯದ ಪ್ರಾಣಿಗಳನ್ನೆಲ್ಲ ಹಂಪಿ ಸಮೀಪದ ಕಮಲಪುರದ ಝೂ ಗೆ ರವಾನೆ ಮಾಡಲು ನಿರ್ಧರಿಸಲಾಗಿದೆ. ಆದರೂ ಗದಗ್ ಮೃಗಾಲಯ ಮುಚ್ಚದಿರಲು ನಿರ್ಧರಿಸಲಾಗಿದೆ. ಹಂಪಿ ಮೃಗಾಲಯ ಆರಂಭಗೊಂಡ ನಂತರ ಬಳ್ಳಾರಿ ಮೃಗಾಲಯ ಮುಚ್ಚುವ ನಿರೀಕ್ಷೆಯಿದೆ.
ಅಂದಹಾಗೇ ಈ ಮೂರು ಝೂ ಮುಚ್ಚುವ ನಿರ್ಧಾರಕ್ಕೆ ಸರಕಾರದ ಅನುಮತಿ ದೊರಕಬೇಕಾಗಿದೆ. ಈ ಮೂರು ಮಿನಿ ಮೃಗಾಲಯದಿಂದ ಪ್ರಾಣಿಗಳನ್ನು ಬೇರೊಂದು ಮೃಗಾಲಯಕ್ಕೆ ವರ್ಗಾಯಿಸಿದರೆ ಆ ಪ್ರಾಣಿಗಳಿಗೆ ಉತ್ತಮ ಸೌಲಭ್ಯ ಮತ್ತು ಹೆಚ್ಚು ಸ್ಥಳಾವಕಾಶವೂ ದೊರಕಲಿದೆ ಎನ್ನಲಾಗಿದೆ.
ಭಾರತದ ಕೇಂದ್ರ ಮೃಗಾಲಯ ಪ್ರಾಧಿಕಾರವು ಹಂಪಿಯಲ್ಲಿ ಮೃಗಾಲಯ ಸ್ಥಾಪಿಸುವ ಯೋಜನೆ ಹೊಂದಿದೆ. ಇದು ಸುಮಾರು 120 ಹೆಕ್ಟೆರ್ ನಷ್ಟು ದೊಡ್ಡದಿರಲಿದ್ದು ಪ್ರಾಣಿಗಳು ವಿಹರಿಸಲು ಸಾಕಷ್ಟು ಸ್ಥಳಾವಕಾಶ ಇರುವಂತೆ ವಿನ್ಯಾಸ ಮಾಡಲಾಗುತ್ತಿದೆ.ಮೈಸೂರಿನ ಚಾಮರಾಜೇಂದ್ರ ಮೃಗಾಲಯ, ಬನ್ನೆರುಘಟ್ಟ ಮೃಗಾಲಯಗಳೂ ಸೇರಿದಂತೆ 8 ಮೃಗಾಲಯಗಳು ಝಡ್ಎಕೆ ನಿರ್ವಹಣೆಗೊಳಪಟ್ಟಿದೆ.