ವರ್ಚಸ್ಸಿಗೆ ಧಕ್ಕೆ ತಂದರೆ ಉಚ್ಛಾಟನೆ : ಪರಮೇಶ್ವರ್
ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡುತ್ತಿದ್ದ ಅವರು, ಹಿರಿಯರೇ ಆಗಲಿ ಕಿರಿಯರೇ ಆಗಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ನಿರತರಾದರೆ ಪಕ್ಷದಿಂದಲೇ ಉಚ್ಛಾಟಿಸಲಾಗುವುದು ಎಂದು ನುಡಿದರು. ಮೈಸೂರಿನ ಸಂಸದ ಎಎಚ್ ವಿಶ್ವನಾಥ್ ಮತ್ತು ಹಿರಿಯ ನಾಯಕ ಡಿಕೆ ಶಿವಕುಮಾರ್ ನಡುವೆ ನಡೆದಿರುವ ವಾಗ್ಯುದ್ಧಕ್ಕೆ ಪ್ರತಿಕ್ರಿಯೆಯಾಗಿ ಪರಮೇಶ್ವರ್ ಶಿಸ್ತಿನಿಂದ ನಡೆದುಕೊಳ್ಳುವಂತೆ ಕಿವಿಮಾತು ಹೇಳಿದರು.
ಮತ್ತೊಬ್ಬ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಕೂಡ ಪದಾಧಿಕಾರಿಗಳ ಸಭೆಯಿಂದ ಹೊರಗುಳಿದಿದ್ದು ನಾನಾ ಊಹಾಪೋಹಗಳಿಗೆ ಕಾರಣವಾಗಿತ್ತು. ಪದಾಧಿಕಾರಿಗಳ ರಚನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡಿದ್ದು, ಚರ್ಚೆಗೆಂದು ಕಾಂಗ್ರೆಸ್ ಹೈಕಮಾಂಡ್ ಅವರನ್ನು ದೆಹಲಿಗೆ ಬುಲಾವ್ ಮಾಡಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಮಡಿಕೇರಿಯಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಅವರು ಉಪಸ್ಥಿತರಿದ್ದರು ಎಂದು ಪರಮೇಶ್ವರ್ ಸಮಜಾಯಿಶಿ ನೀಡಿದ್ದಾರೆ.
ಕೊಡಗಿನ ಅಲ್ಪಸಂಖ್ಯಾತರಿಗೆ ಯಾವುದೇ ಪ್ರಾತಿನಿಧ್ಯ ದೊರಕದ ಕಾರಣ ಟಿ. ಜಾನ್ ರಾಜೀನಾಮೆ ನೀಡಿರುವುದು ಕೂಡ ಕೆಪಿಸಿಸಿಗೆ ತಲೆನೋವಾಗಿ ಪರಿಣಮಿಸಿದೆ. ಎಂಎಂ ನಾಣಯ್ಯ ಅವರನ್ನು ಪ್ರಧಾನ ಕಾರ್ಯದರ್ಶಿ ಮಾಡಿದ್ದು ಕೂಡ ಜಾನ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.
ಹಿರಿಯ ನಾಯಕರ ಎಲ್ಲ ಹೇಳಿಕೆ ಮತ್ತು ಚಟುವಟಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಗಮನಿಸುತ್ತಿದ್ದು, ಇದು ಹೀಗೇ ಮುಂದುವರಿದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ನಿಶ್ಚಿತ ಎಂದು ಡಾ. ಪರಮೇಶ್ವರ್ ಹೇಳಿದ್ದಾರೆ. ಹನ್ನೆರಡು ವರ್ಷಗಳ ನಂತರ ಸಮಿತಿಯನ್ನು ಪುನಾರಚಿಸಲಾಗಿದ್ದರಿಂದ ಕೆಲವರಿಗೆ ಅಸಮಾಧಾನವಾಗಿರುವುದು ಸತ್ಯ. ಮುಂದೆ ಇದನ್ನು ಸರಿಪಡಿಸಲಾಗುವುದು ಎಂದು ಅವರು ಅಸಮಾಧಾನಿಗಳಿಗೆ ಸಾಂತ್ವನ ಹೇಳಿದ್ದಾರೆ.