ತುಮಕೂರಿನಲ್ಲಿ ಈಗ ಸೈಕೋ ಕಿಲ್ಲರ್ ಭಯ

ತುಮಕೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿಗೂಢವಾಗಿ ಕೊಲೆ ಮಾಡಿ ಪರಾರಿಯಾಗಿರುವ "ಸೈಕೋ ಕಿಲ್ಲರ್" ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿದ್ದಾನೆ. ಸೈಕೋ ಕಿಲ್ಲರ್ ಇರುವಿಕೆ ಬಗ್ಗೆ ಊಹಾಪೋಹ ಸುದ್ದಿಗಳನ್ನು ಓದಿ, ಕೇಳಿ ತಿಳಿದಿದ್ದ ಸಾರ್ವಜನಿಕರು, ಪೊಲೀಸರಿಂದ ನಿಜ ಮಾಹಿತಿ ಹೊರ ಬಿದ್ದಮೇಲೆ ಇನ್ನಷ್ಟು ಭಯ ಭೀತರಾಗಿದ್ದಾರೆ.
ಹೇಗಿದ್ದಾನೆ ಈತ: ಸೈಕೋ ಕಿಲ್ಲರ್ ನೋಡಲು ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಸುಮಾರು 30-35 ವರ್ಷದವನಿರಬಹುದು. ಕುರುಚಲು ಗಡ್ಡ, ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಹೆಗಲಿಗೆ ಉದ್ದನೆಯ ಚೀಲವೊಂದನ್ನು ತಗಲಿ ಹಾಕಿಕೊಂಡಿರುತ್ತಾನೆ. ಈತ ಇತ್ತೀಚೆಗೆ ನೆಲಹಾಳ್ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ. ಈತ ಕಂಡ ಗ್ರಾಮಸ್ಥರು ಮಾನಸಿಕ ಅಸ್ವಸ್ಥ ಇರಬಹುದು ಎಂದು ಉದಾಸೀನ ಮಾಡಿದ್ದಾರೆ.
ಆದರೆ, ಈತ ಹೆಂಗಸರನ್ನು ಬೇಟೆಯಾಡುವುದಲ್ಲದೆ, ಆ ಕ್ಷಣಕ್ಕೆ ಸುತ್ತ ಕಾಣಿಸುವ ಎಲ್ಲರನ್ನೂ ಕಾರಣವಿಲ್ಲದೆ ಕೊಚ್ಚಿ ಹೋಗುತ್ತಿದ್ದಾನೆ ಎಂದು ತಿಳಿದು ಬಂದಿದೆ. ಗಿರೇನಹಳ್ಳಿ ತೋಟವೊಂದರಲ್ಲಿ ದೊಡ್ಡಯ್ಯ, ಪುಟ್ಟಮ್ಮ ಹಾಗೂ ರಾಜಮ್ಮ ಎಂಬ ಮೂವರನ್ನು ಕೊಲೆ ಪ್ರಕರಣದಲ್ಲಿ ಸೈಕೋ ಕಿಲ್ಲರ್ ಕೈವಾಡದ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ತೋಟದ ಮನೆಯಲ್ಲಿ ಮೂವರ ಕೊಲೆ ಹೊರತೂ ಯಾವುದೇ ಕಳ್ಳತನ ನಡೆದಿಲ್ಲವಾದ್ದರಿಂದ ಸೈಕೋ ಕಿಲ್ಲರ್ ಬಗ್ಗೆ ಅನುಮಾನ ಹುಟ್ಟಿದೆ.
ಚಿತ್ರದುರ್ಗದಲ್ಲೂ ಭಯ: ಒಂದು ತಿಂಗಳ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಮೂರು ಕೊಲೆಗಳು ನಡೆದಿತ್ತು. ಈ ಎರಡು ಜಿಲ್ಲೆಗಳಲ್ಲಿ ಇಂತಹ ಅನುಮಾನಸ್ಪದ ಕೊಲೆಗಳನ್ನು ಮಾಡಿ ಯಾವುದೇ ರೀತಿಯ ಆಭರಣಗಳನ್ನು, ಹಣವನ್ನು ಹಾಗೂ ಬೆಲೆ ಬಾಳುವ ವಸ್ತುಗಳನ್ನು ದೋಚದೇ ಕೇವಲ ಕೊಲೆಯನ್ನಷ್ಟೇ ಮಾಡಿ ಪರಾರಿಯಾಗುತ್ತಿದ್ದು ಈತನನ್ನು ಒಬ್ಬ ಮಾನಸಿಕ ಅಸ್ವಸ್ಥ ಇರಬಹುದು ಎಂದು ಪೊಲೀಸರು ಊಹಿಸಿದ್ದಾರೆ.
ಆರೋಪಿಯನ್ನು ಪತ್ತೆ ಹಚ್ಚಲು ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಯ ಪೊಲೀಸರು ಮೂರು ನಾಲ್ಕು ತಂಡಗಳೊಂದಿಗೆ ಶೋಧ ಕಾರ್ಯ ಮಾಡುತ್ತಿದ್ದರೂ ಯಾವುದೇ ಫಲ ಸಿಕ್ಕಿಲ್ಲ. ಈತನ ಸುಳಿವಾಗಲಿ ಅಥವಾ ಇದೇ ರೀತಿಯ ವ್ಯಕ್ತಿಗಳು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ತುಮಕೂರು ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications