ಬೆಂಗಳೂರಿನಲ್ಲಿ ಭೂಕಂಪವೇ ಆಗೊಲ್ವಂತೆ!
ಯಾವುದೀ ಶಿಲೆ, ಏನಿದರ ಮಹತ್ವ?: 300 ಕೋಟಿ ವರ್ಷದಷ್ಟು ಹಳೆಯ ನೈಸ್ ಶಿಲೆ ಇದು. ಲಾಲ್ ಬಾಗ್ ನಲ್ಲಿರುವ ಗ್ಲಾಸ್ ಹೌಸ್ ಹಿಂಭಾಗ ಈ ಬೃಹತ್ ಏಕಶಿಲೆ ಬೆಟ್ಟದಂತೆ ಹರಡಿಕೊಂಡಿದೆ. ಇದು ಅಗ್ನಿ ಶಿಲೆಗಳಿಂದ ನಿರ್ಮಾಣವಾದ ಗಟ್ಟಿ ಶಿಲೆ. ಬೆಂಗಳೂರು ಸುತ್ತಮುತ್ತಲ ಪ್ರದೇಶಗಳು ಇಂತಹ ಶಿಲೆಗಳಿಂದಲೇ ಕೂಡಿವೆ. ಆದ್ದರಿಂದ ಬೆಂಗಳೂರು ನೆಲ ಗಟ್ಟಿಮುಟ್ಟಾಗಿದ್ದು ಯಾವುದೇ ಭೂಕಂಪಕ್ಕೆ ಅವಕಾಶ ನೀಡುವುದಿಲ್ಲ. ಅಂದರೆ ಈ ಒಂದು ನೈಸ್ ಶಿಲೆ ಇಡೀ ಬೆಂಗಳೂರನ್ನು ಸುರಕ್ಷಿತವಾಗಿ ಹೊತ್ತುಕೊಂಡಿದೆ!
ಬಹುಶಃ ಇದರ ಮಹತ್ವವನ್ನು ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಅರಿವಿಗೆ ಆಗಲೇ ಬಂದಿರಬೇಕು. ತಾವು ನಿರ್ಮಿಸುತ್ತಿರುವ ಪಟ್ಟಣ ಎಷ್ಟೊಂದು ಸದೃಢವಾಗಿದೆ ಎಂಬುದನ್ನು ಅರಿತಿದ್ದರು. ಅದಕ್ಕೆಂದೇ ಮೊದಲ ಕೆಂಪೇಗೌಡ ಗೋಪುರವನ್ನು ಈ ಬೆಟ್ಟದ ನಟ್ಟನಡುವೆ ಸ್ಥಾಪಿಸಿದರೋ ಏನೋ. ಭೂಕಂಪ ಮುಕ್ತ ಬೆಂಗಳೂರಿನ ಈ ವಿಚಾರ ಹೊರಬಿದ್ದದ್ದು 'ಸುವರ್ಣ ನ್ಯೂಸ್ ಚಾನಲ್' ಶುಕ್ರವಾರ ನಡೆಸಿಕೊಟ್ಟ ಒಂದು ಸಮಾಚಾರ ದರ್ಶನದಲ್ಲಿ. ವಿಚಾರ ಮಂಡಿಸಿದವರು ಭೂಗರ್ಭ ವಿಜ್ಞಾನಿ ಟಿ ಆರ್ ಅನಂತರಾಮು.
'ಹಾಗಂತ ಬೆಂಗಳೂರಿನಲ್ಲಿ ಭೂಕಂಪ ಸಂಭವಿಸುವುದೇ ಇಲ್ಲ ಅಂತೇನಿಲ್ಲ. ಆದರೆ ಅದು ಲಘು ಭೂಕಂಪಗಳಾಗಿರುತ್ತವೆ ಅಷ್ಟೆ. ದಕ್ಷಿಣ ಭಾರತದಲ್ಲಿಯೂ ಇಂತಹ ಗಟ್ಟಿ ಕಲ್ಲುಗಳು ಇರುವುದರಿಂದ ಈ ಭಾಗದಲ್ಲಿ ಭಾರಿ ಭೂಕಂಪಗಳು ಸಂಭವಿಸುವುದಿಲ್ಲ ಎನ್ನಲಾಗಿದೆ. ಅದೇ, ಹಿಮಾಲಯ ಸೇರಿದಂತೆ ಉತ್ತರ ಭಾರತದಲ್ಲಿ ಕಂಡುಬರುವ ಕಲ್ಲುಗಳು ನೀರಿನಿಂದ ಕೂಡಿದ್ದು, ಮೃದುವಾಗಿರುತ್ತವೆ. ಅದಕ್ಕೇ ಉತ್ತರ ಭಾರತ ಆಗಾಗ ಗಡಗಡ ಎನ್ನುತ್ತಿರುತ್ತದೆ' ಎಂದು ಭೂಗರ್ಭ ಶಾಸ್ತ್ರಜ್ಞರು ವಿಶ್ಲೇಷಿಸಿದ್ದಾರೆ.
ಬೆಂಗಳೂರು, ಬನ್ನೇರುಘಟ್ಟ, ಕನಕಪುರ, ರಾಮನಗರ, ಮಾಗಡಿ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಆನೇಕಲ್ಲು ಮುಂತಾದ ಪ್ರದೇಶಗಳಲ್ಲಿ ವಾಸಿಸುವರಿಗೆ ಇದು ಶುಭ ಶುಕ್ರವಾರದ ಶುಭ ಸಮಾಚಾರವಾಗಿ ಗೋಚರಿಸಬಹುದು. ಆದರೆ, ಬೆಂಗಳೂರಿಗೆ ಒಂದು ರೀತಿ ಕೆಟ್ಟ ಸುದ್ದಿ. ಮೊದಲೇ ವಲಸಿಗರಿಂದ ಕಂಗೆಟ್ಟಿರುವ ಈ ನಗರದತ್ತ ಇಡೀ ಉತ್ತರ ಭಾರತದವರು ಗಂಟುಮೂಟೆ ಕಟ್ಟಿಕೊಂಡು ಬಂದುಬೀಳಬಹುದು.